ಹಾವೇರಿ: ‘ಮುರುಘೇಂದ್ರ ಶಿವಯೋಗಿ ಅಪೂರ್ವ ಸಾಧಕರು. ವ್ಯಕ್ತಿ ಕಲ್ಯಾಣ ಆಗಬೇಕಾದರೆ ಲೋಕಾನುಭವವೂ ಅಗತ್ಯ. ಬಸವಣ್ಣನದು ವಚನ ಕ್ರಾಂತಿಯಾದರೆ, ಅಥಣಿ ಮುರುಘೇಂದ್ರ ಶಿವಯೋಗಿಗಳು ಮೌನಕ್ರಾಂತಿ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ’ ಎಂದು ಬಸವಕೇಂದ್ರ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಬಸವಕೇಂದ್ರ ಹೊಸಮಠದಲ್ಲಿ ಗುರುವಾರ ಏರ್ಪಡಿಸಿದ್ದ ಮುರುಘೇಂದ್ರ ಶಿವಯೋಗಿಗಳ 187ನೇ ಜಯಂತ್ಯುತ್ಸವ ಮತ್ತು ವಚನ ಸಾಹಿತ್ಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನಿತ್ಯವೂ ಶಿವಯೋಗ ಸುಖ ಅನುಭವಿಸುತ್ತಾ ಲೋಕಕಲ್ಯಾಣ ಕುರಿತು ಚಿಂತಿಸಿದವರು ಶಿವಯೋಗಿಗಳು. ಲೋಕಹಿತ ಸಾಧಿಸದ ಜೀವನ ವ್ಯರ್ಥವೆಂಬ ಅರಿವು ಅವರಲ್ಲಿ ಮೂಡಿದ್ದರಿಂದ ಲೋಕಹಿತ ಸಾಧಿಸಿದ ಮಹಾಯೋಗಿ ಅವರು’ ಎಂದು ಬಣ್ಣಿಸಿದರು.
‘ಲೋಕಮಾನ್ಯ ಬಾಲಗಂಗಾಧರ್ ತಿಲಕರು ಭೇಟಿಯಾದಾಗ ಭಾರತಕ್ಕೆ ಸ್ವಾತಂತ್ರ್ಯ ದೊರೆಯುತ್ತದೆಂದು ಹಾರೈಸಿದ್ದರು. ಅವರು ನಿಂತ ನೆಲ ಕ್ಷೇತ್ರವಾಗಿದೆ, ಮುಟ್ಟಿದ ಜಲ ತೀರ್ಥವಾಗಿದೆ’ ಎಂದು ಬಸವಶಾಂತಲಿಂಗ ಶ್ರೀ ಅಭಿಪ್ರಾಯಪಟ್ಟರು.
ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ರಾಣೆಬೆನ್ನೂರಿನ ವಿರಕ್ತಮಠದ ಗುರುಬಸವ ಸ್ವಾಮೀಜಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ನಾಗೇಂದ್ರ ಕಟ್ಟಕೊಳ, ಪರಮೇಶಪ್ಪ ಮೆಗಳಮನಿ, ರಾಜೇಂದ್ರ ಸಜ್ಜನರ, ಚಂದ್ರಶೇಖರ ಶಿಸನಳ್ಳಿ, ಮುರುಗೆಪ್ಪ ಕಡೆಕೊಪ್ಪ ಹಾಗೂ ಹೊಸಮಠದ ಅಕ್ಕನ ಬಳಗದವರು ಪಾಲ್ಗೊಂಡಿದ್ದರು.