ಹಾವೇರಿ: ‘ಓದಿನೊಂದಿಗೆ ಆತ್ಮವಿಶ್ವಾಸವಿದ್ದರೆ ಎಂತಹ ಕಷ್ಟಗಳನ್ನಾದರೂ ಎದುರಿಸಿ ಗೆಲ್ಲಬಹುದು. ಆತ್ಮಬಲ ಎಂಬುದು ಮಹಿಳೆಗೆ ಎಲ್ಲಕ್ಕಿಂತ ದೊಡ್ಡದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್ ನುಡಿದರು.
ಇಲ್ಲಿಯ ಶಿವಾಜಿ ನಗರದಲ್ಲಿರುವ ಧ್ವನಿ ಸ್ವಧಾರಾ ಮಹಿಳಾ ವಸತಿ ಕೇಂದ್ರದಲ್ಲಿಯ ಸಂತ್ರಸ್ತೆಯೊಬ್ಬರ ಮಗುವಿಗೆ ‘ಆದ್ಯಾ’ ಎಂದು ನಾಮಕರಣ ಮಾಡಿ ಅವರು ಮಾತನಾಡಿದರು. ‘ಆದ್ಯಾ’ ಎಂದರೆ ದುರ್ಗಿ, ದುರ್ಗಾದೇವಿ ಎಂದರ್ಥ. ಈ ಮಗು ಎಲ್ಲವನ್ನು ಎದುರಿಸಿ ಗೆಲ್ಲಲಿ ಎಂದು ಹಾರೈಸಿದರು.
ಸಿಇಒ ರೋಶನ್ ಅವರ ಪತ್ನಿ, ರೈಲ್ವೆ ಅಧಿಕಾರಿ ಅಂಕಿತಾ ವರ್ಮಾಮಾತನಾಡಿ, ‘ಅನಾಥರ, ಅಸಹಾಯಕರ ಜೊತೆಗೆ ನಾವೆಲ್ಲ ಇರಬೇಕು. ಕರ್ತವ್ಯದ ಸಂಗಡ ಸಮಾಜ ಪ್ರೀತಿ ಇದ್ದರೆ, ನಮ್ಮ ವೃತ್ತಿಗೆ ಇನ್ನೂ ಹೆಚ್ಚು ಘನತೆ ಬರುತ್ತದೆ’ ಎಂದರು.
ಸ್ವಧಾರಾದ ಮುಖ್ಯಸ್ಥೆ ಪರಿಮಳಾ ಜೈನ್ ಮಾತನಾಡಿ, ‘ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ ಎಂಬ ಒಂದೇ ಒಂದು ಸಂದೇಶ ಪ್ರತಿ ಮಹಿಳೆಗೆ ಇಂದು ಬೇಕಾಗಿದೆ. ಈ ದಿಕ್ಕಿನಲ್ಲಿ ನಮ್ಮ ಸಂಸ್ಥೆ ಸಂಕಷ್ಟಕ್ಕೀಡಾದ ಯಾವುದೇ ಮಹಿಳೆಗೆ ದಿನದ 24 ತಾಸು ಸಹಾಯ ಹಸ್ತ ಚಾಚುತ್ತದೆ ಎಂದರು.
ಸಮಾರಂಭದಲ್ಲಿ ಹಿರಿಯ ನಾಗರಿಕ ಸೇವಾ ಇಲಾಖೆಯ ಮಲ್ಲಿಕಾರ್ಜುನ ಮಠದ, ಶರಣ ಸಾಹಿತ್ಯ ಪರಿಷತ್ತಿನ ಎಸ್.ಆರ್. ಹಿರೇಮಠ ಭಾಗವಹಿಸಿದ್ದರು. ಶಾಂತಾ ತಿರುಮಲೆ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಎ.ಎನ್ ವಂದಿಸಿದರು.