ರಾಣೆಬೆನ್ನೂರು: ನಗರದ ವಾಕರಾರ ಸಾರಿಗೆ ಸಂಸ್ಥೆಯ ಬಸ್ ಹರಿದು ವೃದ್ಧೆಯ ಕಾಲು ತುಂಡಾದ ಘಟನೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದೆ.
ಭಾನುವಾರ ಸಂತೆ ದಿನವಾಗಿದ್ದರಿಂದ ಪಟ್ಟಣಕ್ಕೆ ಬೆಣ್ಣೆ ಮಾರಲು ಬಂದ ತಾಲ್ಲೂಕಿನ ಮುದೇನೂರಿನ ಶಾಂತಮ್ಮ ಭರಮಪ್ಪ ಮಾಳನಾಯಕನಹಳ್ಳಿ (75) ಎಂದು ಗುರುತಿಸಲಾಗಿದೆ.
ಹಾವೇರಿಯಿಂದ ರಾಣೆಬೆನ್ನೂರು ಬಸ್ ನಿಲ್ದಾಣದ ಒಳಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ವೃದ್ಧೆಯ ಮೇಲೆ ಅಪ್ಪಳಿಸಿದ್ದರಿಂದ ಬಲಗಾಲಿನ ಮೊಣಕಾಲಿನ ಕೆಳಭಾಗದಿಂದ ಪಾದವರೆಗೆ ಎಲುಬು, ಕೀಲುಗಳು ತುಂಡಾಗಿವೆ. ವೃದ್ಧೆ ರಕ್ತದ ಮಡುವಿನಲ್ಲಿ ನರಳುತ್ತಾ ಕುಳಿತರೂ ಬಸ್ ನಿರ್ವಾಹಕ ಮತ್ತು ಚಾಲಕ ಸಹಾಯಕ್ಕೆ ಬಾರದೆ ವೃದ್ಧೆಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಅಪಘಾತ ಸಂಭವಿಸಿ ಅರ್ಧ ಗಂಟೆ ಕಳೆದರೂ ಯಾವೊಬ್ಬ ಸಾರಿಗೆ ಅಧಿಕಾರಿಗಳು ವೃದ್ಧೆಯ ಬಳಿ ಬರಲಿಲ್ಲ.
ಸ್ಥಳೀಯ ಕಾರು ಚಾಲಕರೊಬ್ಬರು, ಬಸ್ ಚಾಲಕ ಅಥವಾ ಯಾವುದೇ ಅಧಿಕಾರಿಗಳು ತಕ್ಷಣ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡದಿರುವುದನ್ನು ಖಂಡಿಸಿ, ಅಸಮಾಧಾನ ವ್ಯಕ್ತಪಡಿಸಿದರು. ನಿಲ್ದಾಣದಲ್ಲಿದ್ದ ಅನೇಕರು ವಿಡಿಯೊ ಮಾಡಲು ಮುಂದಾದರೇ ಹೊರತು ಆಸ್ಪತ್ರೆಗೆ ಸಾಗಿಸು ಬರಲಿಲ್ಲ.
ತಡವಾಗಿ ಬಂದ ಆಂಬುಲೆನ್ಸ್ನಲ್ಲಿ ಸಾರ್ವಜನಿಕರು ಮತ್ತು ಕುಟುಂಬದವರು ಶಾಂತಮ್ಮಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.