ಹಾವೇರಿ: ‘ನಗರದಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗುತ್ತಿದೆ. ಆದ್ದರಿಂದ ರಾಜಕಾಲುವೆಯನ್ನು ಸ್ವಚ್ಛಗೊಳಿಸಬೇಕು, ರಾಜಕಾಲುವೆ ಮೇಲೆ ಅತಿಕ್ರಮವಾಗಿ ಮನೆ ಕಟ್ಟಿರುವುದನ್ನು ತೆರವುಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆನಗರಸಭೆ ಸದಸ್ಯ ಗಿರೀಶ ತುಪ್ಪದ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ರಾಜಕಾಲುವೆ ಅಲ್ಲಲ್ಲಿ ಮುಚ್ಚಿ ಹೋಗಿರುವ ಕಾರಣ ಕೆರೆಯ ನೀರು ಊರಿನ ಪ್ರಮುಖ ರಸ್ತೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.ಇಜಾರಿಲಕಮಾಪುರ ಬಸಣ್ಣದೇವರಗುಡಿಯಿಂದ ಅಕ್ಕಮಹಾದೇವಿ ಹೊಂಡದವರೆಗೆ ಇರುವ ರಾಜಕಾಲುವೆಯನ್ನು ಮುಚ್ಚಿ ಮನೆಯನ್ನು ನಿರ್ಮಿಸಿದ್ದಾರೆ. ಕಾರಣ ಕೆರೆಗೆ ಹೋಗುವ ನೀರು ಪಿ.ಬಿ. ರಸ್ತೆ ಮುಖಾಂತರ ಊರ ಒಳಗೆ ನುಗ್ಗುತ್ತಿದೆ ಎಂದು ದೂರಿದ್ದಾರೆ.
ಮಂಗಳವಾರ ರಾತ್ರಿ ಕೂಡ ಧಾರಾಕಾರ ಮಳೆಯಿಂದ ರಾಜಕಾಲುವೆಯಿಂದ ನೀರು ಹೊರಬಂದು, ಶಿವಾಜಿನಗರ, ಅಶ್ವಿನಿನಗರ ಐ.ಬಿ. ಎದುರಿನ ಮುಖ್ಯರಸ್ತೆಗಳಲ್ಲಿ ದಾನೇಶ್ವರಿ ನಗರಗಳಲ್ಲಿ ನೀರು ಹೊಳೆಯಂತೆ ಹರಿದಿದೆ. 10 ವರ್ಷದ ಬಾಲಕಿ ನೀರಿಗೆ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಸಹಾಯದಿಂದ ಅವಳನ್ನು ರಕ್ಷಿಸಲಾಯಿತು. ಹಾಗಾಗಿ ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ನಗರಸಭೆಯ ಸದಸ್ಯರಾದ ಚನ್ನಮ್ಮ ಬಸವರಾಜ ಬ್ಯಾಡಗಿ, ಬಾಬುಸಾಬ ಮೋಮಿನಗಾರ, ಶಿವರಾಜ ಮತ್ತಿಹಳ್ಳಿ, ಹಾವೇರಿ ಜಿಲ್ಲಾ ಬಿಜೆಪಿ ಎಸ್.ಟಿ. ಕಾರ್ಯದರ್ಶಿ ಶ್ರೀಕಾಂತ ಪೂಜಾರ, ಜಗದೀಶ ಕನವಳ್ಳಿ, ಬಾಲಕೃಷ್ಣ ಕಲಾಲ, ಜಗದೀಶ ಸವಣೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.