ಹಾವೇರಿ: ಸರ್ಕಾರಿ ಹಾಸ್ಟೆಲ್ ಹಾಗೂ ಸರ್ಕಾರಿವಸತಿ ಶಾಲೆಗಳ ‘ಡಿ' ವರ್ಗದ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನ ಬಿಡುಗಡೆಗೆ ಹಾಗೂ ಲಾಕ್ಡೌನ್ ಅವಧಿಯ ವೇತನವನ್ನು ಸಂದಾಯ ಮಾಡುವ ಮತ್ತು ಕೆಲಸದ ಭದ್ರತೆ ಒದಗಿಸಲು ಒತ್ತಾಯಿಸಿ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿದ್ಯಾರ್ಥಿ ನಿಲಯಗಳಲ್ಲಿ, ಆಶ್ರಮ ಶಾಲೆಗಳಲ್ಲಿ, ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ ಮತ್ತು ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ‘ಡಿ' ವರ್ಗದ ಸಿಬ್ಬಂದಿಗಳಾಗಿ ಹತ್ತಾರು ವರ್ಷಗಳಿಂದ ಅಡುಗೆ, ಸ್ವಚ್ಛತೆ, ಕಾವಲು ಮೊದಲಾದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಕೊರೊನಾ ಪೂರ್ವದ ಕೆಲವು ತಿಂಗಳುಗಳ ವೇತನ ಹಾಗೂ ಲಾಕ್ಡೌನ್ ಅವಧಿಯ ವೇತನ ಸಂದಾಯವಾಗಿಲ್ಲ ಎಂದು ತಿಳಿಸಿದರು.
‘ನಾವು ಆರ್ಥಿಕವಾಗಿ ಹಿಂದುಳಿದವರು. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಈ ಮಹಿಳೆಯರಲ್ಲಿ ಹಲವಾರು ವಿಧವೆಯರು, ಸಣ್ಣ ಸಣ್ಣ ಮಕ್ಕಳನ್ನು ಸಾಕುವ ಜವಾಬ್ದಾರಿ ಉಳ್ಳವರು. ನಾವು ಈಗ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೇ ಪರದಾಡುತ್ತಿದ್ದೇವೆ. ನಮಗೆ ಆದಾಯದ ಬೇರೆ ಮೂಲಗಳಿಲ್ಲ’ ಎಂದು ಸಮಸ್ಯೆ ತೋಡಿಕೊಂಡರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಹಾಸ್ಟೆಲ್ ನೌಕರರಾದ ಎಚ್.ಎಚ್ ನದಾಫ್, ಶಿವರಾಜ ಹಿಟ್ಲರ್, ರಮೇಶ್ ಎನ್.ಬಿ, ಅಕ್ಕಮ್ಮ, ಶಬೀನಾಭಾನು ಬಿ, ಸುನೀತಾ ಬಿ.ಎಚ್, ಸುಶೀಲಾ ಸಿ, ಸುಮಂಗಲ ವಿ ಇದ್ದರು.