ಹಾವೇರಿ:ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುರುಗಲವಾಡಿ ಗ್ರಾಮಕ್ಕೆ ಕಬ್ಬು ಕಟಾವು ಮಾಡಲು ಬಂಜಾರ ಸಮುದಾಯದ ಕೂಲಿಗಾರರ ಜೊತೆಗೆ ವಲಸೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ ಯತ್ನ ಮತ್ತು ಬರ್ಬರ ಕೊಲೆ ನಡೆದಿರುವುದನ್ನು ನಾವು ಖಂಡಿಸುತ್ತೇವೆ. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಬಂಜಾರ ಸಮುದಾಯದ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕೊಲೆ ಆರೋಪಿ ಹುರುಗಲವಾಡಿ ಗ್ರಾಮದ ಆಕಾಶ್ಗೆ ಕಠಿಣ ಶಿಕ್ಷೆ ನೀಡಬೇಕು. ಕೊಲೆಗೆ ಕುಮ್ಮಕ್ಕು ನೀಡಿರುವ ಮತ್ತು ಸಾಕ್ಷಿ ನಾಶಪಡಿಸಲು ಯತ್ನಿಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮೃತ ಬಾಲಕಿ ಕುಟುಂಬದವರಿಗೆ ₹25 ಲಕ್ಷ ಪರಿಹಾರ ನೀಡಬೇಕು.ಬಡತನದ ಕಾರಣಕ್ಕಾಗಿ ವಲಸೆ ಹೋಗುತ್ತಿರುವ ಬಂಜಾರರಿಗೆ ಸೂಕ್ತ ರಕ್ಷಣೆ, ಮಕ್ಕಳಿಗೆ ಶಿಕ್ಷಣ, ಸುರಕ್ಷತೆಯ ಕ್ರಮವಹಿಸಬೇಕು. ವಲಸೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.
ಕೃಷ್ಣಾಪುರದಬಂಜಾರ ಗುರುಪೀಠದಕುಮಾರ ಮಹಾರಾಜರು,ಬಂಜಾರ ಸಂತ ಸೇವಾಲಾಲ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಯರಾಮ ಆರ್. ಮಾಳಾಪುರ,ಗಂಗಾಧರ ಲಮಾಣಿ, ಶೇಖಪ್ಪ ಲಮಾಣಿ, ಚಂದ್ರಪ್ಪ ಲಮಾಣಿ, ಕುಬೇರ ಲಮಾಣಿ, ಆನಂದ ಗಿರಿಸಿನಕೊಪ್ಪ, ಜಗದೀಶ ಆಲೂರ, ಪುಟ್ಟಪ್ಪ ನಲ್ಲೀಬೀಡ ಮುಂತಾದವರು ಪಾಲ್ಗೊಂಡಿದ್ದರು.