ಹಾವೇರಿ: ನಗರದ ‘ಮರಿಕಲ್ಯಾಣ’ ಖ್ಯಾತಿಯ ಹುಕ್ಕೇರಿಮಠದ ಶಿವಬಸವ ಮಹಾಶಿವಯೋಗಿಗಳವರ 75ನೇ ಹಾಗೂ ಶಿವಲಿಂಗ ಮಹಾಶಿವಯೋಗಿಗಳ 12ನೇ ಪುಣ್ಯಸ್ಮರಣೆ ಹಾಗೂ ನಮ್ಮೂರ ಜಾತ್ರಾ ಮಹೋತ್ಸವ ಅಂಗವಾಗಿ ಜ.22ರಂದು ಬೆಳಿಗ್ಗೆ 8.30ಕ್ಕೆ ಷಟಸ್ಥಲ ಧ್ವಜಾರೋಹಣ ನಡೆಯಲಿದೆ.
ಸಂಜೆ 5 ಗಂಟೆಗೆ ಶಿವಬಸವ ಶಿವಯೋಗಿಗಳ ಜನ್ಮಸ್ಥಳ ಅಥಣಿ ತಾಲ್ಲೂಕು ಸಪ್ತಸಾಗರದಿಂದ ಬರುವ ಶಿವಬಸವೇಶ್ವರ ಜ್ಯೋತಿ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನಗರದ ಹಳೇ ಪಿ.ಬಿ.ರಸ್ತೆಯ ಆರ್ಟಿಒ ಕಚೇರಿ ಸಮೀಪವಿರುವ ಅಜ್ಜಯ್ಯನ ಗದ್ದುಗೆಯಿಂದ ವೀರಭದ್ರೇಶ್ವರ ದೇವಸ್ಥಾನದ ಬಳಿ ಜ್ಯೋತಿ ಬರಲಿದೆ. ನಂತರ ಎಂ.ಜಿ.ರಸ್ತೆ ಮುಖಾಂತರ ಶ್ರೀಮಠದವರೆಗೆ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಗುವುದು. ಸಂಜೆ 7 ಗಂಟೆಗೆ ಧಾರ್ಮಿಕ ಸಮಾರಂಭ ನಡೆಯಲಿದೆ.
ಜ.23ರಂದು ಪೂಜ್ಯದ್ವಯರ ಸ್ಮರಣೋತ್ಸವ ಹಾಗೂ ಹುಬ್ಬಳ್ಳಿ ಜಗದ್ಗುರುಗಳಿಗೆ ಗುರುವಂದನಾ ಸಮಾರಂಭ ಏರ್ಪಡಿಸಲಾಗಿದೆ. ಜ. 24ರಂದು ಪೂಜ್ಯದ್ವಯರ ಗದ್ದುಗೆಗಳಿಗೆ ಅರ್ಚನೆ, ಪುಷ್ಪಾಲಂಕಾರ, ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4.30ಕ್ಕೆ ಭಾವಚಿತ್ರ ಉತ್ಸವಕ್ಕೆ ಮಹಾಮಂಗಳಾರತಿ ನಡೆಯಲಿದೆ.
ಕೊರೊನಾ ಇರುವುದರಿಂದ ನಗರದಲ್ಲಿ ಹೊರಡುತ್ತಿದ್ದ ಉತ್ಸವವನ್ನು ರದ್ದುಪಡಿಸಲಾಗಿದೆ. ಭಕ್ತರ ಸಹಕರಿಸಬೇಕು ಎಂದು ಶ್ರೀಮಠ ಪ್ರಕಟಣೆ ತಿಳಿಸಿದೆ.