ಹಾವೇರಿ: ಸವಣೂರ ತಾಲ್ಲೂಕು ಹಿರೇಮುಗದೂರ ಗ್ರಾಮದ ಚಹಾ ಅಂಗಡಿ, ಕಿರಾಣಿ ಅಂಗಡಿ, ಓಣಿಯ ಬೀದಿ ಬೀದಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ‘ಮದ್ಯ ಮುಕ್ತ ಗ್ರಾಮ’ ಎಂದು ಘೋಷಣೆ ಮಾಡಲು ಉತ್ತರ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಹಿರೇಮುಗದೂರು ಗ್ರಾಮದ ಮಹಿಳೆಯರು ಆಗ್ರಹಿಸಿದರು.
ಜಿಲ್ಲಾಡಳಿತ ಭವನದ ಮುಂಭಾಗ ಗುರುವಾರ ಪತ್ರಿಭಟನೆ ನಡೆಸಿ,ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆ ಮದ್ಯ ಸಿಗುತ್ತಿರುವುದರಿಂದ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಕುಡಿಯುವ ಚಟಕ್ಕೆ ದಾಸರಾಗಿದ್ದಾರೆ. ಇದರಿಂದ ಅನೇಕ ಬಡಕುಟುಂಬಗಳು ಬೀದಪಾಲಾಗುತ್ತಿವೆ. ಈ ಬಗ್ಗೆ ಅಬಕಾರಿ ಇಲಾಖೆಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಖರೀದಿ ಕೇಂದ್ರ ತೆರೆಯಿರಿ:
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಎಂಎಸ್ಪಿ ದರದಲ್ಲಿ ಗೋವಿನಜೋಳ ಖರೀದಿ ಕೇಂದ್ರ ತೆರೆಯಬೇಕು. ರಟ್ಟಿಹಳ್ಳಿ ತಾಲ್ಲೂಕು ಹುಲ್ಲತ್ತಿ ಗ್ರಾಮ ಪಂಚಾಯಿತಿಯಲ್ಲಿ ವಾಟರ್ಮನ್ಗೆ 16 ತಿಂಗಳಿಂದ ವೇತನ ಕೊಟ್ಟಿಲ್ಲ. ಸದರಿ ಗ್ರಾಪಂನಲ್ಲಿ 14ನೇ ಹಣಕಾಸಿನಲ್ಲಿ ಭ್ರಷ್ಟಾಚಾರವಾಗಿದ್ದು ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ಕಾಳಿ ಮಾತನಾಡಿ, ಜಿಲ್ಲೆಯಲ್ಲಿ 2019ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಬೆಳೆ ಹಾನಿ ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ. ನೆರೆಯಿಂದ ಹಾನಿಯಾದ ಮನೆಗಳು ಕೆಲವು ಬ್ಲಾಕ್ ಆಗಿವೆ.ಬ್ಲಾಕ್ ಆಗಿರುವ ಮನೆಗಳನ್ನು ಅನ್ಬ್ಲಾಕ್ ಮಾಡಿ ಮನೆ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಸಂಘಟನೆಯ ಶ್ರೀಮತಿ ಫಕ್ಕಿರವ್ವ ಹೊಸಮನಿ,ಜಿಲ್ಲಾ ಗೌರವಾಧ್ಯಕ್ಷರಾದ ಚಂದ್ರಶೇಖರ ಉಪ್ಪಿನ, ಫಕ್ಕಿರಗೌಡ ಗಾಜಿಗೌಡ್ರ, ದಸಂಸ ಮುಖಂಡ ಉಡಚಪ್ಪ ಮಾಳಗಿ, ಜಗದೀಶ ಕುಸಗೂರ, ಚಂದ್ರಶೇಖರ ಸುಣಗಾರ, ಚಂದ್ರಪ್ಪ ಮಾನೇರ, ಕಾಳಪ್ಪ ಲಮಾಣಿ, ಪರಮೇಶಪ್ಪ ಕಟ್ಟೆಕಾರ ಇದ್ದರು.