ರಾಣೆಬೆನ್ನೂರು: ನಗರದಲ್ಲಿ ಗುರುವಾರ ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಕಾಲ ಮಳೆ ಸುರಿಯಿತು. ಚರಂಡಿ ನೀರು ರಸ್ತೆ ಮೇಲೆ ತುಂಬಿ ಹರಿದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡಿದ್ದ ನೀರು ಹರಿದು ಹೋಗಲು ಜಾಗ ಇಲ್ಲದ್ದರಿಂದ ನೆಹರು ಮಾರುಕಟ್ಟೆಗೆ ನೀರು ನುಗ್ಗಿದ್ದರಿಂದ ತರಕಾರಿ ಬುಟ್ಟಿಗಳು ನೀರಲಿ ತೇಲಿ ಹೋದ ದೃಶ್ಯಗಳು ಕಂಡಿ ಬಂದವು.
ಏಕಾಏಕಿ ಚರಂಡಿ ನೀರು ಹರಿದು ಬಂದಿದ್ದರಿಂದ ಬೀನ್ಸ್, ಟೊಮೆಟೊ, ಹಸಿ ಮೆಣಸಿನಕಾಯಿ, ಕ್ಯಾರೇಟ್, ಬೀಟ್ರೂಟ್, ಬೆಂಡಿಕಾಯಿ, ಆಲೂಗಡ್ಡೆ, ಮುಳಗಾಯಿ, ಬೆಳ್ಳುಳ್ಳಿ, ಈರುಳ್ಳಿ, ಹಣ್ಣು, ಖಾಲಿ ಚೀಲಗಳು ಮತ್ತು ಸೊಪ್ಪು ಎಲ್ಲಾ ತರಕಾರಿಗಳು ನೀರು ಪಾಲಾಗಿವೆ ಎಂದು ತರಕಾರಿ ವ್ಯಾಪಾರಸ್ಥರು ಅಳಲು ತೊಡಿಕೊಂಡರು.
ಎಂ.ಜಿ.ರಸ್ತೆ, ಟಾಂಗಾಕೂಟ, ಹಳೆ ತರಕಾರಿ ಮಾರುಕಟ್ಟೆ, ಬಸವೇಶ್ವರ ಅಡಕಿ ಸ್ಟೋರ್, ಪ್ರಿಯಾ ಬಾಳಿಕಾಯಿ ಮಂಡಿ, ಚೌಡೇಶ್ವರಿ ಬಾಳಿಕಾಯಿ ಮಂಡಿ, ಮಾರುತಿ ಬಾಳಿಕಾಯಿ ಅಂಗಡಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಗೋದಾಮು ಮತ್ತು ಬಂದ್ ಮಾಡಿದ್ದ ಅಂಗಡಿಗಳ ಒಳಗೆ ನೀರು ನುಗ್ಗಿದೆ ಎನ್ನುತ್ತಾರೆ ವರಮೂರ್ತಿ ಮತ್ತು ವಿನಾಯಕ ಅಡಿಕೆ ಸ್ಟೋರ್ನ ನಿರಂಜನ.
‘ಎರಡು ಬಾರಿ ಹೀಗೆ ದೊಡ್ಡ ಚರಂಡಿ ನೀರು ಏಕಾಏಕಿ ಮಾರುಕಟ್ಟೆಗೆ ನುಗ್ಗಿ ಅಪಾರ ಹಾನಿಯಾಗಿದೆ. ತರಕಾರಿ ಮಾರಾಟಗಾರರಿಗೆ ಹೆಚ್ಚಿನ ಹಾನಿಯಾಗಿದೆ. ದೊಡ್ಡ ಚರಂಡಿ ಕಟ್ಟಿಕೊಂಡು ಈ ಅವಾಂತರ ನಡೆದಿದೆ’ ಎಂದು ವ್ಯಾಪಾರಸ್ಥ ಅರುಣ ಅಜ್ಜೋಡಿಮಠ ತಿಳಿಸಿದರು.
ನಗರಸಭೆ ಪರಿಸರ ಎಂಜಿನಿಯರ್ ಮಹೇಶ ಕೋಡಬಾಳ ಮಾತನಾಡಿ, ‘ಮಳೆ ನೀರಿನ ಬಗ್ಗೆ ಮಾಹಿತಿ ಬಂದ ಕೂಡಲೇ ನಗರಸಭೆ ಪೌರಕಾರ್ಮಿಕರು ಮತ್ತು ನಾವು ಅಲ್ಲಿಗೆ ಹೋಗಿ ಚರಂಡಿಯಲ್ಲಿ ಕಟ್ಟಿಕೊಂಡಿದ್ದ ತ್ಯಾಜ್ಯವನ್ನು ಜೆಸಿಬಿಯಿಂದ ವಿಲೇವಾರಿ ಮಾಡಿಸಿದ್ದರಿಂದ ನೀರು ಸರಾಗವಾಗಿ ಹರಿಯತೊಡಗಿತು. ದೊಡ್ಡ ಚರಂಡಿ ವಜ್ರದುಂಡಿಯಿಂದ ನಿರ್ಮಿಸಿದ್ದು, ಹಳೆಯ ಕಾಲದ್ದಾಗಿದೆ. ಚರಂಡಿ ಕಿರಿದಾಗಿದೆ. ಕಾಲುವೆಗೆ ಕಸ ಹಾಕುವುದನ್ನು ಬಿಡಬೇಕು’ ಎಂದರು.
ಗಂಗಾಜಲ ತಂಡಾದಲ್ಲಿ ಎರಡು ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಕೆಲ ಕಾಲ ರಸ್ತೆ ಸಂಚಾರ ಬಂದಾಗಿತ್ತು.