ಹಾವೇರಿ: ಜಿಲ್ಲೆಯಲ್ಲಿ ವೈಟ್ ಬೋರ್ಡ್ (ಸ್ವಂತ ಬಳಕೆಯ) ವಾಹನಗಳನ್ನು ಬಾಡಿಗೆಗೆ ಓಡಿಸುತ್ತಿದ್ದು, ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಈಚೆಗೆ ಮನವಿ ಸಲ್ಲಿಸಿದ್ದಾರೆ.
ಸರ್ಕಾರಕ್ಕೆ ತೆರಿಗೆ ಕಟ್ಟಿ, ಕಾನೂನಿನ ಪ್ರಕಾರ ಹಳದಿ ಬೋರ್ಡ್ ವಾಹನವನ್ನು ಬಾಡಿಗೆಗೆ ಓಡಿಸುತ್ತಿರುವ ಮಾಲೀಕರು ಮತ್ತು ಚಾಲಕರಿಗೆ ಅನ್ಯಾಯವಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಟ್ಯಾಕ್ಸಿ ಚಾಲಕರು ಜೀವನ ನಿರ್ವಹಣೆ ಮಾಡಲು ತೊಂದರೆ ಪಡುತ್ತಿದ್ದಾರೆ. ವೈಟ್ ಬೋರ್ಡ್ ವಾಹನಗಳ ಹಾವಳಿಯಿಂದ ನಿಜವಾದ ಬಾಡಿಗೆ ವಾಹನಗಳ ಚಾಲಕರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಗಟ್ಟಬೇಕು ಹಾಗೂ ಅರ್ಹ ಬಾಡಿಗೆ ವಾಹನಗಳ ಚಾಲಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಬಸವರಾಜ್ ಗುಡಗೇರಿ, ಕುಮಾರ್ ಟಿ., ಕರಬಸು ಕರ್ಜಗಿ, ಬಸವರಾಜ್ ಓಂಕಾರ್, ಅರುಣ್, ಪಾಪಣ್ಣ ಎಂ., ಸಮೀರ್ ಲಾಲ್, ಗಣೇಶ್, ಎಲ್ಲಪ್ಪ, ವಿಜಯ್, ನಂದಿ ಪ್ರಕಾಶ್, ಕರಬಸು ಹೊಸಗೌಡ್ರ, ಮಹೇಶ್ ಎಸ್, ರಾಜಣ್ಣ ಮುಂತಾದವರು ಇದ್ದರು.