ರಾಣೆಬೆನ್ನೂರ: ಸಾರಿಗೆ ಸಂಸ್ಥೆಯ ವೇಗದೂತ ಬಸ್ಸುಗಳ ನಿಲುಗಡೆಗೆ ಆಗ್ರಹಿಸಿ ಐದು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ರಸ್ತೆ ತಡೆ ನಡೆಸಿದ ಘಟನೆ ಸೋಮವಾರ ತಾಲ್ಲೂಕಿನ ಕೆರಿ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ದಿನನಿತ್ಯ ನೂರಾರು ಜನರು, ನೌಕರರು ಕೂಲಿಕಾರರು, ಶಾಲಾ, ಕಾಲೇಜಿನ, ವಿದ್ಯಾರ್ಥಿಗಳು ಕೆರಿ ಮಲ್ಲಾಪುರ ಗ್ರಾಮದಿಂದ ರಾಣೆ ಬೆನ್ನೂರ, ಗುತ್ತಲ ಗ್ರಾಮಗಳಿಗೆ ಹೋಗಿಬಂದು ಮಾಡುತ್ತಿದ್ದು, ವೇಗದೂತ ಬಸ್ಸ್ಗಳ ನಿಲುಗಡೆ ಯಿಲ್ಲದ ಕಾರಣ ಜನರಿಗೆ ತೊಂದರೆ ಯಾಗುತ್ತಿದೆ. ಶೀಘ್ರವೇ ಬಸ್ಸುಗಳ ನಿಲುಗಡೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಬಾಗಲಕೋಟೆ, ಬಿಳಗಿರಿರಂಗನ ಬೆಟ್ಟ ರಾಜ್ಯ ಹೆದ್ದಾರಿಯ ಮಾರ್ಗ ಮಧ್ಯದಲ್ಲಿ 15ಕ್ಕೂ ಹೆಚ್ಚು ಸಾರಿಗೆ ಬಸ್ಸುಗಳು ಸೇರಿದಂತೆ ನೂರಾರು ಖಾಸಗಿ ವಾಹನಗಳನ್ನು ತಡೆದು ನಿಲ್ಲಿಸಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು.
ಸಾರಿಗೆ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಏಕಾಂತ ಗರಗ ಹಾಗೂ ನಿಯಂತ್ರಕ ಎ. ಎನ್.ಹಲಗೇರಿ ಅವರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ಗಳೊಂದಿಗೆ ಅಸಭ್ಯವಾಗಿ ವರ್ತಿಸಿ ರುವುದನ್ನು ಖಂಡಿಸಿದರು. ಈ ವೇಳೆ ಗ್ರಾಮಸ್ಥರು, ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರ ಮಧ್ಯ ಮಾತಿನ ಚಕಮಕಿ ನಡೆದು ಪರಿಸ್ಥತಿ ಉದ್ವಿಗ್ನಗೊಂಡಿತ್ತು.
ವಿಭಾಗಿಯ ನಿಯಂತ್ರಣಾಧಿಕಾರಿ ವೆಂಕಟೇಶ, ಡಿಪೊ ಮ್ಯಾನೇಜರ್ ಮಹೇಶ ದೂರವಾಣಿ ಮೂಲಕ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಿ, ವಾರದೊಳಗೆ ಎಲ್ಲ ಬಸ್ಸುಗಳ ನಿಲುಗಡೆ ಮಾಡಿಸು ವುದಾಗಿ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆಸರಿದರು.
ಫಕ್ಕೀರಗೌಡ ಪಾಟೀಲ, ಕೊಟ್ರೇಶ ಬೇತೂರ, ಎಂ.ಚಿರಂಜೀವಿ, ಬಸಲಿಂಗಪ್ಪ ಬನ್ನಿಮಟ್ಟಿ, ಕುಮಾರ ಕಾಕೋಳ, ನಿಂಗರಾಜ ಮಡಿವಾಳರ, ವಿರೇಶ ನರಸಿಪುರ, ಶಿವಯೋಗಿ ಮಡಿವಾಳರ, ಪ್ರಕಾಶ ಶಿಡಗನಹಾಳ ರವಿ ಭಾವಿಕಟ್ಟಿ, ನಿಂಗಪ್ಪ ದಿವಟರ, ಶಿವನಗೌಡ ಪಾಟೀಲ, ಪ್ರದೀಪ ಮಡಿವಾಳರ, ಸಂಜೀವ ಗೂಳಲ ಕಾಯಿ, ರಾಕೇಶ ಪಾಟೀಲ, ಗಣೇಶ ಬಡಿಗೇರ, ವಿಜಯ ಗೂಳಲಕಾಯಿ, ಪ್ರತಾಪ ಹೊನ್ನತ್ತಿ, ಮಂಜು ಮೂಲಿಕೇರಿ, ಚಂದ್ರು ಮಡಿವಾಳರ, ಕಾರ್ತಿಕ ಬೇತೂರ, ರವಿ ಸಾವಜ್ಜಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.