ಶಿಗ್ಗಾವಿ: ಪಟ್ಟಣದ ಸಂತೆ ಮೈದಾನದಲ್ಲಿ ಡಿ.23 (ಶನಿವಾರ) ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆ ಬಹಿರಂಗ ಸಭೆ ನಿಮಿತ್ತ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಪಟ್ಟಣದ ಪಿಎಲ್ಡಿ ಬ್ಯಾಕ್ ವೃತ್ತ, ಮುಖ್ಯ ಪೇಟೆ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸ್ವಾಗತ ಕೋರಲು ಬ್ಯಾನರ್ಗಳನ್ನು ಹಾಕಲಾಗಿದೆ.
ಇಲ್ಲಿನ ಪ್ರವಾಸಿ ಮಂದಿರ ರಸ್ತೆ, ಗಂಗೀಬಾವಿ ಮುಖ್ಯ ರಸ್ತೆ, ಸವಣೂರ ರಸ್ತೆ, ಪುರಸಭೆ ವೃತ್ತದ ಬಳಿ ಸ್ವಾಗತ ಕೋರಲು ಕಮಾನ್ಗಳನ್ನು ಹಾಕಲಾಗಿದೆ. ವಾಹನಗಳ ಮೇಲೆ ಬ್ಯಾನರ್ ಹೊತ್ತುಕೊಂಡು ಧ್ವನಿವರ್ಧಕಗಳ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿದ್ದರು.
‘ಸಂತೆ ಮೈದಾನದಲ್ಲಿ ಬೃಹತ್ ವೇದಿಕೆ, ಸಾರ್ವಜನಿಕರಿಗೆ ಸುಮಾರು 50ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ, ಉಪಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
‘ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ಮುಖಂಡರು, ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಬರುವ ಯಾತ್ರೆಗೆ ತಡಸ ಕ್ರಾಸ್ದಿಂದ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ನಂತರ ಪಟ್ಟಣದ ಪ್ರಮುಖ ರಸ್ತೆಯಾದ ಗಂಗೀಬಾವಿ ಕ್ರಾಸ್ದಲ್ಲಿ ಅದ್ದೂರಿ ಸ್ವಾಗತಿಸಲಾಗುವುದು’ ಎಂದರು.