ಬ್ಯಾಡಗಿ: ರೈತರಿಗೆ ಶೇ.1ರ ಬಡ್ಡಿ ದರದಲ್ಲಿ ಬೆಳೆ ಸಾಲ, ಶೇ.50ರ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡುವ ಮೂಲಕ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಬಿಜೆಪಿ ಸರಕಾರ ಈಡೇರಿಸಿದೆ ಎಂದು ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.
ಸೋಮವಾರ ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಸುವರ್ಣಭೂಮಿ ಯೋಜನೆಯಡಿ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಯೋಜನೆ ಹಾಗೂ ರಿಯಾಯಿತಿ ದರದಲ್ಲಿ ಬೀಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಿಯಾಯಿತಿ ದರದಲ್ಲಿ ನೀಡುವ ಬೀಜಗಳು ಉತ್ತಮ ಗುಣಮಟ್ಟವನ್ನು ಹೊಂದಿದ್ದು ಬ್ಯಾಡಗಿ, ಕಾಗಿನೆಲೆ, ಚಿಕ್ಕಬಾಸೂರ, ಮೋಟೆಬೆನ್ನೂರ ಕೇಂದ್ರಗಳ ಮೂಲಕ ಇವುಗಳನ್ನು ವಿತರಿಸಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಶಿವಶಂಕರ ದಾನೆಗೊಂಡರ ಪ್ರಾಸ್ತಾವಿಕವಾಗಿ ಮಾತನಾಡಿ ಭೂ ಚೇತನ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಜಿಂಕ್, ಬೋರಾನ್ ಹಾಗೂ ಜಿಪ್ಸಂ ಗೊಬ್ಬರ ವಿತರಿಸಲಾಗುತ್ತಿದೆ. ರೈತರು ಇವುಗಳನ್ನು ಬಳಕೆ ಮಾಡುವ ಮೂಲಕ ಯೋಜನೆ ಯನ್ನು ಸಾಕಾರ ಗೊಳಿಸಬೇಕು ಎಂದು ಮನವಿ ಮಾಡಿದರು.
ತಾ.ಪಂ. ಅಧ್ಯಕ್ಷ ಚನ್ನಬಸಪ್ಪ ದೇಸಾಯಿ, ಸದಸ್ಯ ಚಂದ್ರಣ್ಣ ಮುಚ್ಚಟ್ಟಿ, ಜಿ.ಪಂ. ಸದಸ್ಯ ಶಂಕ್ರಣ್ಣ ಮಾತನವರ, ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ, ತಹಸೀಲ್ದಾರ ರಾಜಶೇಖರ ಡಂಬಳ, ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ರೈತ ಸಂಘದ ನಗರ ಅಧ್ಯಕ್ಷ ಚಿಕ್ಕಣ್ಣ ಛತ್ರದ ಹಾಗೂ ಇತರರು ಉಪಸ್ಥಿತರಿದ್ದರು. ಎಟಿವಿ ಸ್ವಾಮಿ ಸ್ವಾಗತಿಸಿದರು. ದಿಲೀಪಕುಮಾರ ವಂದಿಸಿದರು.