ಬ್ಯಾಡಗಿ: ‘ಪ್ರತಿಯೊಬ್ಬ ಕನ್ನಡಿಗ ತನ್ನ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಸಾಹಿತ್ಯದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯಲು ಸಾಧ್ಯ’ ಎಂದು ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ಹೇಳಿದರು. ಭಾನುವಾರ ಪಟ್ಟಣದ ಮುಪ್ಪಿನೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ‘ಸ್ವಾತಂತ್ರ್ಯ ಹೋರಾಟದಲ್ಲಿ ಬ್ಯಾಡಗಿ ತಾಲ್ಲೂಕಿನ ಪಾತ್ರ’ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಮಾತ್ರ ಕಲಿಕೆ ಸಮರ್ಪಕವಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪಾಲಕರು ಇಂಗ್ಲೀಷ ವ್ಯಾಮೋಹ ಬಿಟ್ಟು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹೇಳಿದರು. ಉಪನ್ಯಾಸ ನೀಡಿದ ಸಾಹಿತಿ ಗಂಗಾಧರ ನಂದಿ, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತ್ಯಾಗ ಹಾಗೂ ಬಲಿದಾನದ ಮೂಲಕ ನಾಡಿಗೆ ಸ್ವಾತಂತ್ರ್ಯ ತಂದು ಕೊಡುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಿದ್ದಾರೆ. ನಾಡಿನ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ಗೆ ಉದಾರವಾಗಿ ದತ್ತಿಗಳನ್ನು ನೀಡಿದ್ದರ ಫಲವಾಗಿ ಇಂದು ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಸ್ವಾತಂತ್ರ್ಯ ಹೋರಾಟಗಾರ ಎಸ್.ಆರ್. ಮಹಾರಾಜಪೇಟ ತಮ್ಮ ಪತ್ನಿಯ ಹೆಸರಿನಲ್ಲಿ 10 ಸಾವಿರ ರೂಪಾಯಿ ದತ್ತಿ ದಾನ ನೀಡುವ ಮೂಲಕ ಭಾಷಾಭಿಮಾನ ಮೆರೆದಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಬಿ.ತವರದ, ವಿರೂಪಾಕ್ಷಪ್ಪ ಎಲಿಗಾರ, ಪುಟ್ಟಪ್ಪ ಹರವಿಮನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ರಾಣೆಬೆನ್ನೂರ ತಾಲ್ಲೂಕು ಗಂಗಾಪುರದ ಮರುಳ ಶಂಕರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜಗದೀಶ ಮಹಾರಾಜಪೇಟ ಸ್ವಾಗತಿಸಿದರು. ಮಂಜುನಾಥ ಶಿರವಾಡಕರ ಪ್ರಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮಾಕಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಬಿ.ಎಂ. ಜಗಾಪೂರ ವಂದಿಸಿದರು.