ಹೊಸನಗರ: ಕುಂದಾಪುರದಿಂದ ಶಿಕಾರಿಪುರಕ್ಕೆ ನಡೆದು ಹೊರಟಿದ್ದ ವಲಸೆ ಕಾರ್ಮಿಕರಿಗೆ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ತಪಾಸಣೆ ಮಾಡಿ, ಮನೆಯೊಂದರಲ್ಲಿ ತಂಗಲು ಅವಕಾಶ ಮಾಡಿಕೊಡುವ ಮೂಲಕ ಇಲ್ಲಿನ ವೈದ್ಯ ಸಹೋದರರು ಗಮನಸೆಳೆದಿದ್ದಾರೆ.
ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಗುರುವಾರ ರಾತ್ರಿ ತಮ್ಮ ಸರಕು ಹೊತ್ತು ಸಾಗುತ್ತಿದ್ದ 6 ಜನರ ತಂಡವನ್ನು ಡಾ.ಪ್ರದೀಪ್ ಡಿಮೆಲ್ಲೊ, ಡಾ.ಸುದೀಪ್ ಡಿಮೆಲ್ಲೋ ಸಹೋದರರು ವಿಚಾರಿಸಿದ್ದಾರೆ. ತಮ್ಮ ಪರಿಚಯ ಹೇಳಿಕೊಂಡ ಅವರು, ‘ಕುಂದಾಪುರಕ್ಕೆ ಕೂಲಿಗಾಗಿ ವಲಸೆ ಹೋಗಿದ್ದೆವು. ಲಾಕ್ಡೌನ್ನಿಂದ ವಾಹನ ಇಲ್ಲವಾಗಿದೆ. ಇದೀಗ ನಡೆದುಕೊಂಡೆ ಶಿಕಾರಿಪುರದ ಗುಡ್ಡೇಕೇರಿಗೆ ಹೋಗುತ್ತಿದ್ದೇವೆ ಎಂದಿದ್ದಾರೆ.
ಇದಕ್ಕೆ ಸ್ಪಂದಿಸಿದ ವೈದ್ಯ ಸಹೋದರರು, ‘ರಾತ್ರಿ ವೇಳೆ ಹೋಗುವುದು ಬೇಡ’ ಎಂದು ಹೇಳಿ ಅವರಿಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಯಲ್ಲೇ ಆಶ್ರಯ ನೀಡಿ, ಉಪಚರಿಸಿ, ಆರೋಗ್ಯ ತಪಾಸಣೆ ಮಾಡಿದರು.
ಬೆಳಿಗ್ಗೆ ಹೊರಡಲು ನಿಂತ ಕಾರ್ಮಿಕರಿಗೆ ಉಪಹಾರ ನೀಡಿ, ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಿ, ಗ್ಲೌಸ್ ಮತ್ತು ಮಾಸ್ಕ್ ನೀಡಿದ್ದಲ್ಲದೆ, ತಹಶೀಲ್ದಾರ್ ಅನುಮತಿ ಮೇರೆಗೆ ತಾಲ್ಲೂಕಿನ ಗಡಿಭಾಗದ ವರೆಗೆ ಸುಮಾರು 50 ಕಿ.ಮೀ ತನಕ ತಮ್ಮ ವಾಹನದಲ್ಲಿ ಬೀಳ್ಕೊಟ್ಟಿದ್ದಾರೆ.