ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಬಂಧನಕ್ಕೆ ಒಳಗಾಗಿರುವ ರಾಯಚೂರು ಜಿಲ್ಲೆ ಲಿಂಗಸುಗೂರು ಉಪವಿಭಾಗದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿಯ ಬೆರಳಚ್ಚು ವಿಭಾಗದ ಇನ್ಸ್ಪೆಕ್ಟರ್ ಆನಂದ ಮೇತ್ರಿ ಸೇರಿ 12 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಎಂ.ಎಸ್.ಇರಾನಿ ಪದವಿ ಕಾಲೇಜಿನಲ್ಲಿ ತೆರೆದಿದ್ದ ಪಿಎಸ್ಐ ಪರೀಕ್ಷಾ ಕೇಂದ್ರಗಳಿಗೆ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದಇಬ್ಬರು ಮಹಿಳಾ ಪಿಎಸ್ಐ ಸೇರಿ 10 ಜನ ಸಿಬ್ಬಂದಿಯನ್ನು ಕಲಬುರಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ್ ಅಮಾನತುಗೊಳಿಸಿದ್ದಾರೆ.
ಪಿಎಸ್ಐಗಳಾದ ಶ್ರೀಶೈಲಮ್ಮ, ನಜ್ಮಾ ಸುಲ್ತಾನಾ, ಎಎಸ್ಐಗಳಾದ ಶಶಿಕುಮಾರ್, ಲತಾ, ಹೆಡ್ ಕಾನ್ಸ್ಟೆಬಲ್ಗಳಾದ ಪಾರುಬಾಯಿ, ಜೈಭೀಮ್, ಶರಣಬಸಪ್ಪ, ದಾಮೋದರ, ಪೊಲೀಸ್ ಕಾನ್ಸ್ಟೆಬಲ್ಗಳಾದ ಪ್ರದೀಪ್, ರಾಜಶ್ರೀ ಅಮಾನತುಗೊಂಡವರು.
ಈ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದರಿಂದ ಕರ್ತವ್ಯಲೋಪದ ಆರೋಪದ ಮೇರೆಗೆ ಇವರನ್ನು ಅಮಾನತುಗೊಳಿಸಲಾಗಿದೆ. ಗೃಹ ಇಲಾಖೆಯು ಹೊರಡಿಸಿದ್ದ ಮಲ್ಲಿಕಾರ್ಜುನ ಸಾಲಿ ಹಾಗೂ ಆನಂದ ಮೇತ್ರಿ ಅವರ ಅಮಾನತು ಆದೇಶವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಕಳಿಸಲಾಗಿತ್ತು. ಸಿಐಡಿ ವಶದಲ್ಲಿರುವ ಈ ಇಬ್ಬರಿಗೂಆದೇಶ ಪತ್ರಗಳನ್ನು ಸಿಬ್ಬಂದಿಯ ಮೂಲಕಶನಿವಾರ ತಲುಪಿಸಲಾಯಿತು.
ಎಂಟು ದಿನ ಸಿಐಡಿ ಕಸ್ಟಡಿಗೆ: ಶುಕ್ರವಾರ ಸಂಜೆ ಬಂಧಿತರಾದ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿ ವೈಜನಾಥ ರೇವೂರ ಅವರನ್ನು ಏಳು ದಿನಗಳವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿ ಇಲ್ಲಿನ ಮೂರನೇ ಜೆಎಂಎಫ್ ನ್ಯಾಯಾಲಯ ಆದೇಶಿಸಿದೆ.