ಬಿಜೆಪಿಯ ಸುನಿಲ್ ವಲ್ಯಾಪುರೆ ಅವರ ಬೀದರ್–ಶ್ರೀರಂಗಪಟ್ಟಣ ಹೆದ್ದಾರಿ ಸಂಚಾರ ದಟ್ಟಣೆ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯ ಸಂಚಾರ ದಟ್ಟಣೆ ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ರಾಜಧಾನಿ ಬೆಂಗಳೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಜೇವರ್ಗಿಯಿಂದ ಲಿಂಗಸುಗೂರು ಭಾಗವು 113 ಕಿ.ಮೀ ಇರುತ್ತದೆ. ರಾಷ್ಟ್ರೀಯ ಹೆದ್ದಾರಿ 150ಎ ಜೇವರ್ಗಿಯಿಂದ ಶಹಾಪುರವರೆಗಿನ 50 ಕಿ.ಮೀ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತದೆ. ಇದನ್ನು ನಾಲ್ಕು ಪಥದ ರಸ್ತೆ ಮಾಡಲು ಡಿಪಿಆರ್ ಹಂತದಲ್ಲಿರುತ್ತದೆ. ಶಹಾಪುರದಿಂದ ತಿಂತಣಿ ಸೇತುವೆಯವರೆಗಿನ ರಸ್ತೆಯ ಕಾಮಗಾರಿಯನ್ನು ನಿಯತಕಾಲಿಕ ನಿರ್ವಹಣೆ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿದ್ದು, ಅದರ ನಿರ್ವಹಣೆ ಅವಧಿ 2025ರ ಏಪ್ರಿಲ್ 30ರವರೆಗೂ ಇದೆ’ ಎಂದು ತಿಳಿಸಿದರು.