ಮಡಿಕೇರಿ: ಆತಿಥೇಯ ಕುಲ್ಲೇಟಿರ ತಂಡವು ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಅಮ್ಮಾಟಂಡ ತಂಡದ ವಿರುದ್ಧ 2–0 ಅಂತರದಲ್ಲಿ ಜಯಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡದ ನಾಚಪ್ಪ, ಯತೀನ್ ತಲಾ ಒಂದು ಗೋಲು ಗಳಿಸಿ, ಗೆಲುವಿಗೆ ನೆರವಾದರು.
ಕೊಂಡೀರ ತಂಡವು ಶಿವಚಾಳಿಯಂಡ ತಂಡದ ವಿರುದ್ಧ 3–1 ಅಂತರದಲ್ಲಿ ಗೆದ್ದಿತು. ಕೊಂಡೀರ ತಂಡದ ತಮ್ಮಯ್ಯ 1, ಹೇಮಂತ್ ಮಾದಪ್ಪ 2 ಗೋಲು ಗಳಿಸಿದರು. ಶಿವಚಾಳಿಯಂಡ ತಂಡ ಪರವಾಗಿ ವಿಜು ಪೂಣಚ್ಚ 1 ಗೋಲು ದಾಖಲಿಸಿದರು.
ಕಂಬೀರಂಡ ತಂಡವು ಬೊಳಿಯಾಡಿರ ವಿರುದ್ಧ 5–0 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಕಂಬೀರಂಡದ ಯೋಗೇಶ್ ಅಪ್ಪಯ್ಯ 2 ಹಾಗೂ ಮಹಿಮ್ ಮೊಣ್ಣಪ್ಪ, ರಮೇಶ್, ರಾಯ್ ಜಗದೀಶ್ ತಲಾ ಒಂದೊಂದು ಗೋಲು ಗಳಿಸಿದರು.
ಅರಮಣಮಾಡ ತಂಡವು ಪಳೆಂಗಡ ತಂಡದ (3–0) ವಿರುದ್ಧ ಗೆದ್ದಿತು. ಚರ್ಮಣ್ಣ 1, ನಿರನ್ 2 ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ಕಲ್ಲೆಂಗಡ ವಿರುದ್ಧ ನೆಲ್ಲಮಕ್ಕಡ (4–0) ತಂಡವೂ, ಚೋಡುಮಾಡು ತಂಡದ ವಿರುದ್ಧ ಅಂಜಪರವಂಡ (4–0) ತಂಡವೂ ಜಯಿಸಿತು. ಮೇಕೇರಿರ ತಂಡವು ಮಾಚಂಡದ ವಿರುದ್ಧ 5–0 ಅಂತರದಲ್ಲಿ ಗೆದ್ದಿತು. ಮೇಕೇರಿರ ಆಟಗಾರರಾದ ನೇಹಲ್, ಚೇತನ್, ನಿತಿನ್, ವಿಜು ಚಿಣ್ಣಪ್ಪ ಹಾಗೂ ಅಭಿನವ್ ಒಂದೊಂದು ಗೋಲು ಗಳಿಸಿದರು.
ಚಂದುರ ಮತ್ತು ಮದ್ರೀರ ತಂಡಗಳು ನಿಗದಿತ (1–1) ಸಮಯದಲ್ಲಿ ಸಮಬಲದ ಹೋರಾಟ ನಡೆಸಿದವು. ಬಳಿಕ ಟೈಬ್ರೇಕರ್ನಲ್ಲಿ ಚಂದುರ ತಂಡವು 6–5 ಅಂತರದಲ್ಲಿ ಗೆದ್ದಿತು.