ಕಲಬುರ್ಗಿ: ಕೊರೊನಾ ಪ್ರಯುಕ್ತ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸುಗಳ ಪರೀಕ್ಷೆಗಳನ್ನು ನಡೆಸುವುದು ಬೇಡ ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದ್ದರೂ ಆದರೂ, ಗುಲಬರ್ಗಾ ವಿಶ್ವವಿದ್ಯಾಲಯ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದು, ಕೂಡಲೇ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆರೋಪಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ವಿ.ವಿ. ಕಾರ್ಯಸೌಧದ ಎದುರು ಪ್ರತಿಭಟನೆ ನಡೆಸಿದರು.
‘ನಗರಗಳಲ್ಲಿರುವ ಕೆಲವು ಪದವಿ–ಸ್ನಾತಕೋತ್ತರ ಕಾಲೇಜುಗಳಲ್ಲಿ ಸರಿಸುಮಾರು ಅರ್ಧ ಪಠ್ಯಕ್ರಮವನ್ನು ಮಾತ್ರ ತೆಗೆದುಕೊಳ್ಳಲಾಗಿದ್ದು, ಇನ್ನು ಸ್ವಲ್ಪ ಆನ್ಲೈನ್ ತರಗತಿಗಳ ಮೂಲಕ ಪಾಠಗಳನ್ನು ಮಾಡಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಆಗಿಲ್ಲ. ಹೀಗಾಗಿ, ಪರೀಕ್ಷೆ ನಡೆಸುವುದೇ ಆದರೆ ನೇರವಾಗಿ ತರಗತಿಗಳನ್ನು ತೆಗೆದುಕೊಂಡು ನಂತರ ಪರೀಕ್ಷೆ ನಡೆಸಬೇಕು. ಅಲ್ಲಿಯವರೆಗೆ ಪರೀಕ್ಷಾ ಶುಲ್ಕ ಸಂಗ್ರಹ ಬಿಡಬೇಕು ಮತ್ತು ಈಗಾಗಲೇ ಸಂಗ್ರಹಿಸಿದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್ ಮಾಡಬೇಕು. ನಂತರ ಪರೀಕ್ಷೆ ನಡೆದರೂ ಅದನ್ನು ಸರ್ಕಾರವೇ ಭರಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಸ್.ಎಚ್, ಜಿಲ್ಲಾ ಕಾರ್ಯದರ್ಶಿ ಈರಣ್ಣ ಇಸಬಾ, ಜಿಲ್ಲಾ ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ, ಜಿಲ್ಲಾ ಸಮಿತಿ ಸದಸ್ಯರಾದ ಗೌತಮ ಪೋತನಕರ್, ತುಳಜರಾಮ ಎನ್.ಕೆ, ರಮೇಶ ದೇವಕರ, ವೆಂಕಟೇಶ ದೇವದುರ್ಗ, ಶಿಲ್ಪಾ ಬಿ.ಕೆ, ಗೋದಾವರಿ, ಅರುಣ್ ಇದ್ದರು.
ಮನವಿಯನ್ನು ಕುಲಸಚಿವ (ಆಡಳಿತ) ಡಾ.ಸಿ.ಸೋಮಶೇಖರ್ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ್ ಸ್ವೀಕರಿಸಿದರು.