ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯನಿಷ್ಠುರಿ ನಿಜಶರಣ ಅಂಬಿಗರ ಚೌಡಯ್ಯ’

ಜಿಲ್ಲಾಡಳಿತ, ಗುಲಬರ್ಗಾ ವಿ.ವಿ., ಬಿಜೆಪಿ ಕಚೇರಿಯಲ್ಲಿ ಆಚರಣೆ
Last Updated 21 ಜನವರಿ 2021, 16:50 IST
ಅಕ್ಷರ ಗಾತ್ರ

ಕಲಬುರ್ಗಿ: ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುಲಬರ್ಗಾ ವಿಶ್ವವಿದ್ಯಾಲಯ, ಭಾರತೀಯ ಜನತಾ ಪಕ್ಷ ಹಾಗೂ ಕೋಲಿ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ಆಚರಿಸಲಾಯಿತು.

ಜಿಲ್ಲಾಡಳಿತ: ಕೋವಿಡ್ ಪ್ರಯುಕ್ತ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಶಿವಶರಣಪ್ಪ ಕೋಬಾಳ, ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಶರಣಪ್ಪ ಚಿಂಚೋಳಿ, ಕಲಬುರ್ಗಿ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ,ಅಖಿಲ ಕರ್ನಾಟಕ ಟೋಕರೆ ಕೋಲಿ, ಕೋಲಿ, ಕಬ್ಬಲಿಗ ಬುಡಕಟ್ಟು ಪಂಗಡಗಳ ಸುಧಾರಣಾ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಕೋಲಿ ಸಮಾಜದ ಮುಖಂಡರಾದ ಡಾ. ಮಲ್ಲಿಕಾರ್ಜುನ ಮುಕ್ಕಾ, ಶಿವಶರಣಪ್ಪ ಬೆಣ್ಣೂರ್, ಅಭಿಷೇಕ ರೆಡ್ಡಿ, ಮಹೇಶ ಶಿವಣಗಿ, ಮಲ್ಲಿಕಾರ್ಜುನ ನಾಯ್ಕೋಡಿಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು.

ಗುಲಬರ್ಗಾ ವಿ.ವಿ: ಗುಲಬರ್ಗಾ ವಿಶ್ವವಿದ್ಯಾಲಯದ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದಿಂದ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಚಾಲನೆ ನೀಡಿದರು.

ನಂತರ ಮಾತನಾಡಿದ ಯಾತನೂರ, ‘ಸಮಾಜದ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಮುಂದಾಲೋಚನೆ ಮಾಡಿದಂತಹ ವಚನಕಾರರ ಚಿಂತನೆಗಳು ಆದರ್ಶಪ್ರಾಯವಾದವು. ಜಾತಿ ಮತ ಲಿಂಗ ಭೇದಭಾವವನ್ನು ತೊರೆದು ಸಮ ಸಮಾಜ ಕಟ್ಟಬಯಸಿದಂತಹ ಹರಿಕಾರರು ವಚನಕಾರರು. ಶರಣರ ಚಿಂತನೆಗಳು, ಮೌಲ್ಯಗಳು, ನೈತಿಕ ವಿಚಾರಗಳು ಬದುಕಿನಲ್ಲಿ ಅವಳವಡಿಸಿಕೊಂಡಾಗ ಸಮಾಜ ಬದಲಾವಣೆ ಸಾಧ್ಯವೆಂದು ಹೇಳಿದರು.

ಮುಖ್ಯ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ. ಕೆ. ರವೀಂದ್ರನಾಥ, ವೈಚಾರಿಕ ಪ್ರಜ್ಞೆಯಿಂದ ಜನ ಸಮೂಹದ ಮೌಢ್ಯವನ್ನು ಹೊಡೆದೋಡಿಸಿದ ಮಹನೀಯರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರು. ಚಳವಳಿ ಆಶಯ ತಿಳಿಯಬೇಕೆಂದರೆ ಶ್ರಮ ಶಕ್ತಿಯಿಂದ ಮೇಲೆ ಬಂದ ವಚನಕಾರರಿಂದ ತಿಳಿದುಕೊಳ್ಳಲಿಕ್ಕೆ ಸಾಧ್ಯವಿದೆ. ಶರಣ ಚಳವಳಿಯಲ್ಲಿ ವಚನಗಳ ಮುಖಾಂತರ ಸಾಕ್ಷಿಪ್ರಜ್ಞೆಯಾಗಿ ಅಂಬಿಗರ ಚೌಡಯ್ಯ ಇದ್ದಾರೆ. ಪ್ರಗತಿಪರ ನೇರ, ದಿಟ್ಟ ನುಡಿಯ ವಚನಕಾರ. ತಾತ್ವಿಕ ಹಾಗೂ ಆಶಯದ ದೃಷ್ಟಿಯ ವಚನಗಳನ್ನು ಜನಪದರು ಇಂದಿಗೂ ಬಳಸುತ್ತಿದ್ದಾರೆ. ತನ್ನ ಹೆಸರನ್ನೇ ಅಂಕಿತ ನಾಮವಾಗಿ ಇಟ್ಟುಕೊಂಡ ವಚನಕಾರರ ವ್ಯಕ್ತಿತ್ವ ಕುರಿತು ಹೇಳಬೇಕೆಂದರೆ ಸಮಾಜವೇ ಅವರ ವಚನಕ್ಕೆ ಮೂಲ ಪ್ರೇರಣೆಯಾಗಿವೆ. ನಿಜಶರಣ ಎಂದು ಜನರೇ ಈತನನ್ನು ಕರೆದಿದ್ದು ಎಂದು ಗುರುತಿಸಬಹುದು. ಅರಿವು ಆಚಾರ ಅನುಭದಿಂದ ಕೂಡಿದ ಬದುಕು ನಮ್ಮದಾಗಬೇಕೆಂದು ಚೌಡಯ್ಯ ತಿಳಿಸಿದ್ದಾರೆ ಎಂದರು.

ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ಮಾತನಾಡಿ, ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣು. ಧೈರ್ಯದಿಂದ ನಿರ್ಭಯದಿಂದ ಮಾತಾಡಿದ ವಚನಕಾರರ ಅಂಬಿಗರ ಚೌಡಯ್ಯ. ವಚನಕಾರರ ಚಳುವಳಿ ಸಮಾಜ ಮುಖಿ ಚಳುವಳಿ ಸಮ–ಸಮಾಜವನ್ನು ಕಟ್ಟ ಬಯಸಿದ ಅನುಭಾವಿಗಳ ಆಂದೋಲನ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ. ಭಗವಂತಪ್ಪ ಬುಳ್ಳಾ ಅತಿಥಿಯಾಗಿದ್ದರು. ಹಂಗಾಮಿ ಕುಲಸಚಿವ ಪ್ರೊ.ಸಂಜೀವ ಕುಮಾರ ಕೆ.ಎಂ, ಪ್ರೊ. ಲಕ್ಷ್ಮಣ ರಾಜನಾಳಕರ್, ಪ್ರೊ. ಬಿ.ಎಂ. ಕನ್ನಳ್ಳಿ, ಪ್ರೊ.ಡಿ.ಬಿ. ಪಾಟೀಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಾ. ಶುಲಾಬಾಯಿ ಎಚ್. ವಂದಿಸಿದರು. ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಚನಗಾಯನ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT