ಸೇಡಂ: ‘ಬಸವಣ್ಣನವರು, 12ನೇ ಶತಮಾನದಲ್ಲಿ ಮನುಕುಲಕ್ಕೆ ನೀಡಿದ ಕಾಯಕ ತತ್ವವು, ನಾಡಿನ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಉತ್ಸವದಲ್ಲಿ ಅವರು ಮಾತನಾಡಿದರು.
‘ನಾಡಿನಲ್ಲಿರುವ ಪ್ರತಿಯೊಬ್ಬರು ತಮಗಿಷ್ಟವಾದ ಕಾಯಕವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮಾಡಿದ್ದಲ್ಲಿ ನಾಡಿನ ಆರ್ಥಿಕ ಹೆಚ್ಚುತ್ತದೆ. ಪ್ರತಿಯೊಬ್ಬರೂ ಕಾಯಕ ಮಾಡುವುದರಿಂದ ನಿರುದ್ಯೋಗ ಸಮಸ್ಯೆಯೇ ಇರೋದಿಲ್ಲ. ಯಾರೂ ಸಹ ಹಸಿವಿನಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಇದರಿಂದ ವಿವಿಧ ಕ್ಷೇತ್ರಗಳ ಪ್ರಗತಿ ತನ್ನಿಂದ ತಾನಾಗಿಯೇ ನಡೆಯುತ್ತದೆ’ ಎಂದು ಹೇಳಿದರು.