ಕಲಬುರ್ಗಿ: ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೃದಯಾಘಾತದಿಂದ ನಿಧನರಾದ ಪ್ರಯುಕ್ತ ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಮಾತನಾಡಿ, ‘ಬೆಳಗೆರೆ ಅವರು ಸಾಹಿತ್ಯ ಪ್ರಕಾರದ ಎಲ್ಲ ಆಯಾಮಗಳಲ್ಲಿಯೂ ಬರವಣಿಗೆ ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಇತ್ತೀಚೆಗೆ ಜಮ್ಮು–ಕಾಶ್ಮೀರದ ಪುಲ್ವಾಮಾಗೆ ತೆರಳಿ ಅಲ್ಲಿ ಯುದ್ಧ ಸನ್ನಿವೇಶದ ಸಾಕ್ಷಾತ್ ವರದಿ ಮಾಡಿದರು’ ಎಂದು ಸ್ಮರಿಸಿದರು.
ಹಿರಿಯ ವರದಿಗಾರ ಬಾಬುರಾವ ಯಡ್ರಾಮಿ ಮಾತನಾಡಿ, ‘ತಮ್ಮ ಆಕರ್ಷಕ ಬರವಣಿಗೆಯ ಶೈಲಿಯ ಮೂಲಕ ಹೊಸ ಓದುವ ವರ್ಗವನ್ನು ಸೃಷ್ಟಿಸಿದ ಖ್ಯಾತಿ ರವಿ ಬೆಳಗೆರೆ ಅವರಿಗೆ ಸಲ್ಲುತ್ತದೆ. ಎಲ್ಲ ವರ್ಗದವರು ಓದುವ ಪತ್ರಿಕೆಯನ್ನು ರೂಪಿಸುವಲ್ಲಿ ಅವರ ಶ್ರಮ ಅಪಾರವಾಗಿತ್ತು. ವಾರಪತ್ರಿಕೆ, ಮಾಸ ಪತ್ರಿಕೆ, ಜೊತೆಗೆ ಶಾಲೆ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಿ ಮಾಡಿದ ಸಾಧನೆ ಅಪಾರ’ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆವಂಟಿ, ಹಿರಿಯ ಪತ್ರಕರ್ತರಾದ ಹಣಮಂತರಾವ ಭೈರಾಮಡಗಿ, ಸಂಗಮನಾಥ ರೇವತಗಾಂವ, ಪ್ರಶಾಂತ್, ಅರುಣ ಕದಂ, ಪ್ರವೀಣ ಪಾರಾ, ವಿಜಯ ವಾರದ ಇತರರು ಇದ್ದರು.