ಚಿಂಚೋಳಿ(ಕಲಬುರಗಿ): ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಿಂದ 600 ಕ್ಯುಸೆಕ್ ನೀರು ಸರನಾಲಾ ನದಿಗೆ ಬುಧವಾರ ತಡರಾತ್ರಿಯಿಂದ ಬೆಳಗಿನವರೆಗೆ ಬಿಡುಗಡೆ ಮಾಡಲಾಗಿದೆ ಎಂದು ಯೋಜನೆಯ ಎಇಇ ಚೇತನ ಕಳಸ್ಕರ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
'ಜಲಾಶಯದ ಗರಿಷ್ಠ ಮಟ್ಟ ಸಮುದ್ರಮಟ್ಟದಿಂದ 1,618 ಅಡಿ ಇದೆ. ಪ್ರಸ್ತುತ ಜಲಾಶಯಕ್ಕೆ 1,613.5 ಅಡಿ ತಲುಪಿದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ರಾತ್ರಿ ಮಾತ್ರ 600 ಕ್ಯುಸೆಕ್ ನೀರು ಬಿಡಲಾಗಿದೆ. ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ನೀರು ಸರನಾಲಾ ನದಿಗೆ ಗೇಟುಗಳ ಮೂಲಕ ಬಿಡಲಾಗಿದೆ' ಎಂದರು.
'ಪ್ರವಾಹ ನಿರ್ವಹಣೆ ಉದ್ದೇಶದಿಂದ ಈ ನೀರು ಬಿಡಲಾಗಿದೆ. ಪ್ರಸ್ತುತ ಜಲಾಶಯಕ್ಕೆ 723 ಕುಸೆಕ್ ಒಳ ಹರಿವಿದೆ. ಜಲಾಶಯದಲ್ಲಿ ಗರಿಷ್ಠ ಶೇ 75ರಷ್ಟು ಮಾತ್ರ ನೀರು ಸಂಗ್ರಹಿಸಿ, ಉಳಿದ ನೀರು ನದಿಗೆ ಬಿಡಲಾಗುವುದು. ಹೀಗಾಗಿ ಗುರುವಾರ ರಾತ್ರಿ ಮತ್ತೆ ನದಿಗೆ ನೀರು ಬಿಡಲಾಗುವುದು' ಎಂದು ಹೇಳಿದರು.