ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ 5 ದಿನ ಕೆಲಸ ಮಾಡುವ ಪದ್ಧತಿ ಜಾರಿಗಾಗಿ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ

ಸಮಾಜ ಕಲ್ಯಾಂ ಸಚಿವ ಪ್ರಿಯಾಂಕ್ ಖರ್ಗೆ
Last Updated 2 ಅಕ್ಟೋಬರ್ 2018, 16:29 IST
ಅಕ್ಷರ ಗಾತ್ರ

ಬೆಂಗಳೂರು/ ಕಲಬುರ್ಗಿ: ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನ ಕೆಲಸ ಮಾಡುವ ಪದ್ಧತಿ ಜಾರಿಗೆ ತರಬೇಕು ಎಂಬ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ.

ಸದ್ಯ ಸರ್ಕಾರಿ ಕಚೇರಿಗಳು ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತಿವೆ. ತಿಂಗಳ ಎರಡನೇ ಶನಿವಾರ ರಜಾ ದಿನ. ಐದು ದಿನಗಳ ವಾರದ ಪದ್ಧತಿಯನ್ನು ಜಾರಿಗೆ ತರುವಂತೆ ಸರ್ಕಾರಿ ನೌಕರರ ಸಂಘಟನೆ ಆರನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿತ್ತು.

ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ರಜೆ ನೀಡಿ, ಪ್ರತಿ ದಿನ ಹೆಚ್ಚುವರಿಯಾಗಿ ಅರ್ಧ ಗಂಟೆ ಕೆಲಸದ ಅವಧಿ ವಿಸ್ತರಿಸುವಂತೆ ಎಂ.ಆರ್‌. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಆರನೇ ವೇತನ ಆಯೋಗ ತನ್ನ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆಯೋಗ ಸಲ್ಲಿಸಿದ ಮಧ್ಯಂತರ ವರದಿ ಅನುಷ್ಠಾನಗೊಂಡಿದ್ದು, ಅಂತಿಮ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಆಗಿಲ್ಲ. ಇದೇ 4ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ವರದಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಆ. 28ರಂದು ಬರೆದಿರುವ ಪತ್ರ ಚರ್ಚೆಗೆ ಗ್ರಾಸವಾಗಿದೆ.

‘ಸರ್ಕಾರ ಈಗ ನೀಡುತ್ತಿರುವ ಸಾರ್ವತ್ರಿಕ ರಜೆಗಳನ್ನು ಮಿತಿಗೊಳಿಸಿ ಅವಶ್ಯವಿರುವ ರಜೆ ತೆಗದುಕೊಳ್ಳುವಂತೆ ನಿರ್ಬಂಧಿತ ರಜೆ ಹೆಚ್ಚಳ ಮಾಡಬೇಕು. ಆ ಮೂಲಕ ಐದು ದಿನಗಳ ಕೆಲಸದ ವಾರವನ್ನು ರಾಜ್ಯದಲ್ಲಿ ಜಾರಿಗೆ ತರಬಹುದು’ ಎಂದು ಪತ್ರದಲ್ಲಿ ಖರ್ಗೆ ಸಲಹೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಕಲಬುರ್ಗಿಯಲ್ಲಿ ಮಂಗಳವಾರ ಮಾತನಾಡಿದ ಪ್ರಿಯಾಂಕ್‌, ‘ರಜೆಗಳನ್ನು ಕಡಿತಗೊಳಿಸಿದರೆ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡಂತಾಗುತ್ತದೆ. ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಬೇಕಾದ ನಾವು, ಅವರ ಜಯಂತಿ ದಿನದಂದು ರಜೆ ತೆಗೆದುಕೊಳ್ಳುವುದು ಸರಿಯಲ್ಲ. ಹೀಗಾಗಿವಾರದಲ್ಲಿ 5 ದಿನ ಕೆಲಸ ಮಾಡುವ ಪದ್ಧತಿ ಜಾರಿಗೆ ತರಬೇಕು ಎಂಬುದು ನನ್ನ ಅನಿಸಿಕೆ’ ಎಂದರು.

‘ಸಚಿವರು ಪತ್ರ ಬರೆದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಆರನೇ ವೇತನ ಆಯೋಗದ ವರದಿಯಲ್ಲಿ ರಜೆಯ ಬಗ್ಗೆ ಪ್ರಸ್ತಾಪವಿದೆ. ಮುಂದಿನ ಸಂಪುಟ ಸಭೆಯಲ್ಲಿ ಆಯೋಗದ ವರದಿಯನ್ನು ಚರ್ಚೆಗೆ ಎತ್ತಿಕೊಳ್ಳುವ ನಿಟ್ಟಿನಲ್ಲಿ ಕಡತ ಇನ್ನೂ ನನ್ನ ಬಳಿಗೆ ಬಂದಿಲ್ಲ’ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು.

‘ವಾರದಲ್ಲಿ ಐದು ದಿನ ಕೆಲಸ ಮಾಡುವ ಪದ್ಧತಿ ಜಾರಿಗೆ ತರುವಂತೆ ಶಿಫಾರಸು ಮಾಡಲು ನಾವು ಆಯೋಗಕ್ಕೆ ಮನವಿ ಮಾಡಿದ್ದೇವೆ. ಆದರೆ, ಕೆಲಸದ ಅವಧಿ 10ರಿಂದ 6 ಗಂಟೆಯವರೆಗೆ ನಿಗದಿಪಡಿಸಬೇಕು. ಬೆಳಿಗ್ಗೆ 9.30ಕ್ಕೆ ನಿಗದಿಪಡಿಸಿದರೆ ಬೆಂಗಳೂರಿನಂಥ ನಗರದಲ್ಲಿ ನಿರ್ದಿಷ್ಟ ಸಮಯದಲ್ಲಿ ಕಚೇರಿ ತಲುಪುವುದು ಕಷ್ಟ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮು ಅಭಿಪ್ರಾಯಪಟ್ಟರು.

*

ಸರ್ಕಾರಿ ರಜೆ ಕಡಿತಗೊಳಿಸಿ, ಕಚೇರಿಗಳ ಸಮಯ 10.30 ರಿಂದ 5 ಗಂಟೆ ಬದಲು 9.30 ಗಂಟೆ<br/>ಯಿಂದ 6 ಗಂಟೆ ಮಾಡಿದರೆ ಒಳ್ಳೆಯದು
- ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

*

ಪ್ರಿಯಾಂಕ್‌ ಖರ್ಗೆ ಬರೆದಿರುವ ಪತ್ರ ನನಗೆ ತಲುಪಿಲ್ಲ. ರಜೆ ಕುರಿತ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೈಗೊಳ್ಳಬೇಕಾಗುತ್ತದೆ
- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

*

ಕೆಲಸದ ದಿನಗಳನ್ನು ಐದು ದಿನಕ್ಕೆ ಸೀಮಿತಗೊಳಿಸಬೇಕು ಎಂಬ ಬೇಡಿಕೆ ಬಗ್ಗೆ ಚರ್ಚಿಸಲು ಸಮ<br/>ಯಾವಕಾಶ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇವೆ
- ರಾಮು,ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT