ಕಲಬುರ್ಗಿ: ‘ಯೋಗಗುರು ಬಾಬಾ ರಾಮದೇವ್ ಖಾವಿ ತೊಟ್ಟ ಭಯೋತ್ಪಾದಕ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಿಡಿಕಾರಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ದಲಿತರ ಮುಂದಿನ ಸವಾಲುಗಳು ಹಾಗೂ ವಂಚಿತ ಸವಲತ್ತುಗಳ ಕುರಿತುಸೋಮವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರನ್ನು ಬೌದ್ಧಿಕ ಭಯೋತ್ಪಾದಕರು ಎಂದು ಕರೆದಿರುವ ಬಾಬಾ ರಾಮದೇವ್ಮೊದಲು ತಾನು ಎಲ್ಲಾ ರೀತಿಯಿಂದಲೂ ಸರಿ ಆಗಲಿ, ಆಗ ಬೇರೊಬ್ಬರ ಬಗ್ಗೆ ಮಾತನಾಡಲಿ’ ಎಂದು ವ್ಯಂಗ್ಯವಾಗಿ ಹೇಳಿದರು.
‘ದಲಿತರ ನಿಜವಾದ ತಾಯಿ. ಇಡೀ ಜಗತ್ತಿಗೆ ಯೋಗ ಹೇಳಿಕೊಡುತ್ತೇನೆ ಎಂದು ಹೇಳಿಕೊಳ್ಳುವ ಬಾಬಾ ರಾಮದೇವ್ಅಂಥವರನ್ನು ಟೀಕಿಸುತ್ತಾರೆ, ಇದನ್ನು ಸಹಿಸಲು ಸಾಧ್ಯವೇ ಇಲ್ಲ’ ಎಂದು ಗುಡುಗಿದರು.
‘ಮೀಸಲಾತಿವಿರೋಧಿಗಳ ಕೈಯಲ್ಲಿ ಸಂವಿಧಾನ ಇರುವುದರಿಂದ ಅದು ಸರಿಯಾಗಿ ಜಾರಿ ಆಗುತ್ತಿಲ್ಲ. ದಲಿತರಿಗೆ ಉನ್ನತ ಹುದ್ದೆಗಳು ಸಿಗುತ್ತಿಲ್ಲ. ಅವುಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿವೆ. ದಲಿತ ಸಮುದಾಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದರು.
‘ಅಂಬೇಡ್ಕರ್ ಅವರ ಆಶಯದಂತೆ ಆಯುಧಗಳ ಬದಲು ಆದರ್ಶ ಭಾರತ ನಿರ್ಮಾಣ ಆಗಬೇಕು. ಪ್ರತಿ ಮನೆಯಲ್ಲೂ ಅಂಬೇಡ್ಕರ್ ಹುಟ್ಟಬೇಕು’ ಎಂದು ಹೇಳಿದರು.
‘ಪೆನ್ನುಗಳ ಭಾರತವಾಗಲಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಬಯಸಿದ್ದರು. ಆದರೆ ಇಂದು ಗನ್ನುಗಳ ಭಾರತ ಆಗುತ್ತಿದೆ. ಇದು ಆತಂಕಕಾರಿ ವಿಷಯ’ ಎಂದು ವಿಷಾದಿಸಿದರು.
ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, ‘ಆರ್ಎಸ್ಎಸ್ ಹಾಗೂ ಮನುವಾದಿಗಳು ಸಂವಿಧಾನವನ್ನು ಸುಡುಲು ಹೊರಟಿದ್ದಾರೆ.ದಲಿತ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.
‘ದೇಶದಲ್ಲಿ ಜಾತಿ ತಾರತಮ್ಯ ಇಂದಿಗೂ ಇದೆ. ಮಾರ್ಯಾದೆ ಹತ್ಯೆಗಳು ನಡೆಯುತ್ತಿವೆ, ದಲಿತರ ಹಕ್ಕುಗಳನ್ನು ಕಿತ್ತುಕೊಂಡು ತುಳಿಯಲಾಗುತ್ತಿದೆ. ಇದರ ವಿರುದ್ಧ ಒಗ್ಗಟ್ಟಿನ ಹೋರಾಟಅಗತ್ಯವಾಗಿದೆ’ಎಂದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಜಾತೀಯತೆ ಸವಾಲನ್ನು ಎದುರಿಸಲು ಯುವಜನತೆಯನ್ನು ಸಜ್ಜು ಮಾಡಬೇಕಾಗಿದೆ ಎಂದು ಹೇಳಿದರು.
ದಲಿತರನ್ನು ಒಂದು ಸಮುದಾಯದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಈ ಬಗ್ಗೆ ನಾವು ಎಚ್ಚರದಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.ಸಮುದಾಯದ ಜನರಿಗೆಇಂದಿಗೂ ಸಮಾಧಿಗೆ ಜಾಗ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಸುಧಾಮ ಧನ್ನಿ, ಸೋಮಶೇಖರ ಸಿಂಗೆ, ಶರಣಬಸಪ್ಪ, ಚಿತ್ರಾಬಾಯಿ, ಕಮಲಾಬಾಯಿ ಇದ್ದರು.