ಕಲಬುರಗಿ: ಆಸ್ತಿ ತೆರಿಗೆಗೆ ಸಂಬಂಧಪಟ್ಟಂತೆ ಸರ್ಕಾರ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಮನವಿ ಸಲ್ಲಿಸಿ ಹೋರಾಡಲು ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ನಿರ್ಧರಿಸಿದರು.
ನಗರದ ಕಲ್ಯಾಣ ಕರ್ನಾಟಕ ಪ್ರದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಚೇರಿಯಲ್ಲಿ ಶುಕ್ರವಾರ ನಡೆದ ನಡೆದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕೈಗಾರಿಕಾ ಸಂಸ್ಥೆಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ರಾಯಚೂರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ ಮಾತನಾಡಿ, ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಎಪಿಎಂಸಿ ನೂತನ ಕಾಯ್ದೆ ಜಾರಿಗೊಳಿಸಬಾರದು ಎಂದು ಮನವಿ ಮಾಡಲಾಗಿದೆ. ಮಾರುಕಟ್ಟೆ ಸಮಿತಿಯ ಸುಂಕವನ್ನು 60 ಪೈಸೆಯಿಂದ 30 ಪೈಸೆಗೆ ಇಳಿಸಬೇಕು ಎನ್ನುವುದೂ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ’ ಎಂದು ಹೇಳಿದರು.
‘ಕೆಇಆರ್ಸಿ ವಿರುದ್ಧ ಕಳೆದ ಅವಧಿಯ ವಿದ್ಯುತ್ ದರ ಏರಿಕೆ ಕುರಿತು ಅಪ್ಲೈಟ್ ಟ್ರಿಬುನಲ್ನಲ್ಲಿ ದಾವೆ ಹೂಡಲಾಗಿದೆ. ಅದಕ್ಕೆ ಉತ್ತರ ನೀಡುವಂತೆ ಜೆಸ್ಕಾಂಗೆ ನೋಟಿಸ್ ಬಂದಿದೆ’ ಎಂದು ಸಂಸ್ಥೆಯ ವಿಜಯನಗರದ ಅಧ್ಯಕ್ಷರು ಅಶ್ವಿನ್ ಕೋತಂಬರಿ ತಿಳಿಸಿದರು.
‘ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರಿಂದ ಕೈಗಾರಿಕಾ ಕ್ಷೇತ್ರದಲ್ಲಿ ವಿದ್ಯುತ್ ದರ ಏರಿಕೆಯಾಗಿಲ್ಲ. ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು’ ಎಂದು ಪರಿಸರವಾದಿ ದೀಪಕ್ ಗಾಲಾ ಆಗ್ರಹಿಸಿದರು.
ಸಭೆಯಲ್ಲಿ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಲಬುರಗಿ ಅಧ್ಯಕ್ಷರಾದ ಶಶಿಕಾಂತ ಬಿ. ಪಾಟೀಲ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿ.ಮಹಾರುದ್ರಗೌಡ, ಯಾದಗಿರಿ ಅಧ್ಯಕ್ಷ ದಿನೇಶಕುಮಾರ ಜೈನ್, ರಾಯಚೂರ ಅಧ್ಯಕ್ಷ ಎಸ್. ಕಮಲಕುಮಾರ, ಹೊಸಪೇಟ ಜಿಲ್ಲಾ ಅಧ್ಯಕ್ಷ ಅಶ್ವಿನ್ ಕೋತಂಬರಿ, ಪ್ರಶಾಂತ ಎಸ್. ಮಾನಕರ, ರಾಮಕೃಷ್ಣ ಬೋರಾಳಕರ್, ಚನ್ನಮಲ್ಲಿಕಾರ್ಜುನ ಅಕ್ಕಿ, ಶರಣಬಸಪ್ಪ ಎಮ್. ಪಪ್ಪ, ಮಂಜುನಾಥ ಜೇವರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಮುಖಂಡರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.