ಸೇಡಂ: ಸೇಡಂನ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಭಾನುವಾರ ಮಠಾಧೀಶರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇಡಂ ಜಿಲ್ಲಾ ರಚನಾ ಸಮಿತಿ ರಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸೇಡಂನ ಮಠಾಧೀಶರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಕೀಯ ಗಣ್ಯರು, ಹಿರಿಯ ಮುಖಂಡರು, ಸಾಹಿತಿಗಳು, ಸಂಘಟನೆಗಳು ಪ್ರಮುಖರು, ವ್ಯಾಪಾರಸ್ಥರು, ರೈತರು ಹಾಗೂ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡು ಜಿಲ್ಲಾ ರಚನೆಗೆ ಬೇಕಾದ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕೆಲವರು ಕಾನೂನಾತ್ಮಕವಾಗಿ ಹೋರಾಟದ ಕುರಿತು ನಿರ್ಧರಿಸಿದರೆ, ಕೆಲವರು ಇದಕ್ಕೆ ಸುಮ್ಮನಿರುವುದು ಸರಿಯಲ್ಲ ಹೋರಾಟವೇ ಮುಖ್ಯ. ಹೋರಾಟದಿಂದ ಮಾಡಿದ್ದಲ್ಲಿ ಎಲ್ಲವೂ ನಮಗೆ ಸಿಗುತ್ತವೆ ಎಂಬುವುದರ ಕುರಿತು ಅನೇಕರು ಅಭಿಪ್ರಾಯವ್ಯಕ್ತಪಡಿಸಿದರು.
ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ‘ವೇಗವಾಗಿ ಬೆಳೆಯುತ್ತಿರುವ ಪಟ್ಟಣ ತಾಲ್ಲೂಕು ರಚನೆಯಾಗಿ ಅನೇಕ ದಶಕಗಳೇ ಕಳೆದಿವೆ. ಸರ್ಕಾರಕ್ಕೆ ತೆರಿಗೆ ಕಟ್ಟುವುದರಲ್ಲಿ ಸೇಡಂ ಹಿಂದೆ ಬಿಂದಿಲ್ಲ.ಜಿಲ್ಲಾ ರಚನೆಗೆ ಸೇಡಂನ ಎಲ್ಲರೂ ಪಕ್ಷಾತೀತವಾಗಿ, ಧರ್ಮಾತೀತವಾಗಿ ಹಾಗೂ ಜಾತ್ಯಾತೀತವಾಗಿ ಕೆಲಸ ಮಾಡಬೇಕಾಗಿದೆ’ ಎಂದು ಹೇಳಿದರು.
ಸೇಡಂನ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಮುಖಂಡ ಮುಕ್ರಂಖಾನ್, ಚಂದ್ರಶೇಖರರೆಡ್ಡಿ ದೇಶಮುಖ, ನಾಗರೆಡ್ಡಿ ಪಾಟೀಲ ಇದ್ದರು.