ಕಾಳಗಿ: ರಟಕಲ್ ಗ್ರಾಮದ ಮಹೆಬೂಬ್ ಸುಬಾನಿ ದರ್ಗಾ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಪೊಲೀಸ್ ಠಾಣೆಯ ತಡೆಗೋಡೆ ಕಟ್ಟಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೌಹಾರ್ದ ಸಮಿತಿಯ ಸದಸ್ಯರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ದರ್ಗಾ ಮೇಲೆ ಹಿಂದೂ ಮತ್ತು ಮುಸ್ಲಿಮರು ಪೂಜನೀಯ ನಂಬಿಕೆ ಇರಿಸಿಕೊಂಡು ಬರುತ್ತಿದ್ದಾರೆ. ಇಂತಹ ಧಾರ್ಮಿಕ ಸ್ಥಳದಲ್ಲಿ ತಡೆ ಗೋಡೆ ಕಟ್ಟಿರುವುದು ಸರಿಯಲ್ಲ. ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಧರಣಿ ನಿರತರು ಮನವಿ ಮಾಡಿದ್ದರು.
ಗ್ರಾಮದಲ್ಲಿ ಪೊಲೀಸ್ ಠಾಣೆ ತೆರೆಯುವ ಮುನ್ನವೇ ದರ್ಗಾ ಇತ್ತು. ಪೊಲೀಸ್ ಇಲಾಖೆಗೆ ಜಮೀನು ಮಾರಿದ್ದ ಅಬ್ದುಲ್ ಸಾಬ್ ಅವರ ತಂದೆ, ಯಾವುದೇ ಕಾರಣಕ್ಕೂ ದರ್ಗಾ ತೆರವುಗೊಳಿಸಬಾರದು ಎಂಬ ಷರತ್ತು ಹಾಕಿದ್ದರು. ಆದರೆ, ಈಗ ಗೋಡೆ ಕಟ್ಟಲಾಗಿದೆ ಎಂದು ದೂರಿದ್ದಾರೆ.
‘ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ಈಗಿರುವ ದರ್ಗಾದ ದಕ್ಷಿಣ ದಿಕ್ಕಿನಲ್ಲೇ ಹಾದಿ ಮಾಡಲಾಗಿದೆ. ಹಳೆಯ ಹಾದಿಗಿಂತ ಈಗಿನದ್ದು ಉತ್ತಮ ಹಾಗೂ ವಿಶಾಲವಾಗಿದೆ. ಪೊಲೀಸ್ ಇಲಾಖೆಗೆ ಷರತ್ತು ಬದ್ಧವಾಗಿ ಮಾರಾಟ ಮಾಡಿದ್ದು ಯಾವುದೇ ದಾಖಲೆ ಇಲ್ಲ. ಭಕ್ತರ ಓಡಾಟಕ್ಕೆ ಸಕಲ ವ್ಯವಸ್ಥೆ ಮಾಡಿ ತಡೆ ಗೋಡೆ ಕಟ್ಟಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.