ಕಲಬುರಗಿ: ಇಲ್ಲಿನ ಹಲವು ನಗರಗಳಲ್ಲಿ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಕಾರಣ ತಕ್ಷಣ ದಿನದ 24 ಗಂಟೆಯೂ ನೀರು ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಲಬುರಗಿ ತಾಲ್ಲೂಕು ಘಟಕದಿಂದ ಮಂಗಳವಾರ, ನಗರ ನೀರು ಸರಬುರಾಜು ಮತ್ತು ಒಳಚರಂಡಿ ಮಂಡಳಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರದ ಪಲ್ಲಾಪುರ, ಜಾಫರಾಬಾದ್, ಪಂಡಿತ ದೀನ ದಯಾಳ್ ಉಪಾಧ್ಯಾಯ ನಗರ ಹಾಗೂ ಎಸ್.ಎಂ. ಕೃಷ್ಣಾ ಆಶ್ರಯ ಕಾಲೊನಿಗಳಿಗೆ ನಿಯಮಿತವಾಗಿ ನೀರು ಸರಬರಾಜು ಮಾಡದ ಕಾರಣ, ಜನ ರೋಸಿಹೋಗಿದ್ದಾರೆ. ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು, ಇದರಿಂದ ಅಲ್ಲಿಯ ಬಡವರು ಕೂಡ ನೀರು ಖರೀದಿಸಿ ಕುಡಿಯಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು ಜಾಣಕುರುಡುತನ ತೋರಿದ್ದಾರೆ’ ಎಂದೂದೂರಿದರು.
‘ಕೊಡ ನೀರಿಗಾಗಿ ದಿನವಿಡೀ ಕಾಯಬೇಕಾಗಿದೆ. ಇದರಿಂದ ಕೂಲಿ ಮಾಡಲು ಹೋಗುವವರ ಸ್ಥಿತಿ ಹೇಳತೀರದು. ತಕ್ಷಣ ಈ ಪ್ರದೇಶಗಳಿಗೆ ನೀರು ಒದಗಿಸಿ ಸಮಸ್ಯೆ ನೀಗಿಸಬೇಕು. ಇಲ್ಲದಿದ್ದರೆ ಸ್ಥಳೀಯ ನಿವಾಸಿಗಳ ಸಮೇತ ಹೋರಾಟ ಮಾಡಲಾಗುವುದು’ ಎಂದೂ ಎಚ್ಚರಿಸಿದರು.
ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಪುನೀತ್ರಾಜ ಕವಡೆ, ನಿಸಾರ ಅಹ್ಮದ್ ಖಾನ್, ಅಶೋಖ ಭೀಮಳ್ಳಿ, ಅಲ್ಲಿಸಾಬ, ಪೃತ್ವಿರಾಜ ರಾಂಪುರೆ, ವಾಸಂಬಿ ಕಡಗಂಚಿ, ಆಕಾಶ ರಾಠೋಡ, ಶರಣಗೌಡ ಪಾಟೀಲ, ಸಿದ್ದಣಗೌಡ ಪಾಟೀಲ ಇದ್ದರು.