ಚಿಂಚೋಳಿ (ಕಲಬುರ್ಗಿ):ಪುಟ್ಟ ಮಕ್ಕಳಿಗೆ ವಿಷವುಣಿಸಿ ಕೊಂದಿದ್ದ ತಾಲ್ಲೂಕಿನ ಬೈರಂಪಳ್ಳಿಯ ಸಂಜೀವ ರಾಠೋಡ (35) ತೆಲಂಗಾಣದ ತಾಂಡೂರು ಬಳಿ ರೈಲಿಗೆ ತಲೆ ಕೊಟ್ಟು ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮದ್ಯವ್ಯಸನಿಯಾಗಿದ್ದ ಸಂಜೀವ ಗುರುವಾರ ಸಂಜೆ ತನ್ನಿಬ್ಬರು ಮಕ್ಕಳಾದ ರೋಹಿತಾ ಸಂಜೀವ (4) ಹಾಗೂ ಪರ್ವಿತಾ (3) ಎಂಬುವವರಿಗೆ ವಿಷವುಣಿಸಿ ಸಾಯಿಸಿದ್ದ. ಈ ಬಗ್ಗೆ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. ತಾನೂ ವಿಷ ಕುಡಿದಿದ್ದಾಗಿ ಹೇಳಿದ್ದ.
ಆದರೆ ಮಕ್ಕಳನ್ನು ವಿಷ ಕುಡಿಸಿದ ಜಾಗದಲ್ಲಿ ಈತನ ಶವ ಇರದಿದ್ದರಿಂದ ಅನುಮಾನಗೊಂಡ ಪೊಲೀಸರು ಹುಡುಕಾಟ ನಡೆಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಸಂಜೀವ ರಾಠೋಡ ಆತ್ಮಹತ್ಯೆ ಸುದ್ದಿ ಬಂದಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಎಸ್ಪಿ ಪತಿ, ಪತ್ನಿ ಮಧ್ಯೆ ಹೊಂದಾಣಿಕೆ ಸಮಸ್ಯೆ ಇತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದರು.
ಶುಕ್ರವಾರ ಮಧ್ಯಾಹ್ನ ಇಬ್ಬರೂ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.