ದಂಡೋತಿ, ಮುಡಬೂಳ, ಭಾಗೋಡಿ, ಕಾಟಮ್ಮದೇವರಹಳ್ಳಿ, ಇಂಗಳಗಿ ಗ್ರಾಮಗಳಿಗೆ ನೀರು ನುಗ್ಗಿದೆ.ಗುರುವಾರ ನಸುಕಿನ 3 ಗಂಟೆಯವರೆಗೆ ನದಿಯ ಪ್ರವಾಹವು ವೇಗವಾಗಿ ಏರುತ್ತಿದೆ. ಇದರಿಂದ ಊರು ತೊರೆಯಬೇಕಾದ ಅನಿವಾರ್ಯತೆ ಹಲವರಿಗೆ ಬಂದಿದೆ. ದಂಡೋತಿ ಗ್ರಾಮದ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನರು ಮನೆ ಖಾಲಿ ಮಾಡಿದ್ದಾರೆ. ಹಳ್ಳದ ಬಸವೇಶ್ವರ ದೇವಾಲಯ, ಬಲಭೀಮೆಶ್ವರ ದೇವಾಲಯ, ಅಂಗನವಾಡಿ ಕೇಂದ್ರ, ಪಶು ಆಸ್ಪತ್ರೆ ಜಲಾವೃತಗೊಂಡವು. ಮುಡಬೂಳ ಗ್ರಾಮವು ನಡುಗಡ್ಡೆಯಾಗಿ ಮಾರ್ಪಟ್ಟಿತ್ತು. ಕಾಗಿಣಾ ನದಿ ಪ್ರವಾಹದ ಹಿನ್ನೀರು ಗ್ರಾಮವನ್ನು ಸುತ್ತುವರೆದಿತ್ತು. ಮರಗೋಳ ಹಳ್ಳ, ನಾಗಾವಿ ಹಳ್ಳದ ನೀರು ಗ್ರಾಮವು ಚಿತ್ತಾಪುರ ಪಟ್ಟಣ ಮತ್ತು ಇತರೆ ಗ್ರಾಮಗಳಿಂದ ಸಂಪರ್ಕ ಕಡಿದುಕೊಂಡಿದೆ.