ಕಲಬುರಗಿ: ಭುವನೇಶ್ವರ–ಮುಂಬೈ ಮಧ್ಯೆ ಸಂಚರಿಸುವ ಕೊನಾರ್ಕ್ ಎಕ್ಸ್ಪ್ರೆಸ್ ರೈಲಿನ ಪ್ಯಾಂಟ್ರಿ ಕಾರ್ನಲ್ಲಿ ಸಾಗಿಸುತ್ತಿದ್ದ ₹ 6 ಲಕ್ಷ ಮೌಲ್ಯದ 30 ಕೆ.ಜಿ ಗಾಂಜಾವನ್ನು ರೈಲ್ವೆ ಪೊಲೀಸರು ಸೇಡಂ ರೈಲು ನಿಲ್ದಾಣದಲ್ಲಿ ಬುಧವಾರ ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಒಡಿಶಾದ ಭುವನೇಶ್ವರದಿಂದ ರೈಲು ಬರುತ್ತಿದ್ದಂತೆಯೇ ಖಚಿತ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ತಪಾಸಣೆ ನಡೆಸಿದ ಸಂದರ್ಭದಲ್ಲಿ ಗಾಂಜಾ ಪತ್ತೆಯಾಯಿತು. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಆರೋಪಿ ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾದ ಬ್ರಹ್ಮಪುರದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಪೂರೈಕೆಯಾಗುತ್ತಿದೆ. ಈ ಗಾಂಜಾವನ್ನು ಆರೋಪಿ ಪುಣೆ ಹಾಗೂ ಮುಂಬೈಗೆ ಕಳುಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಾಡಿ ರೈಲ್ವೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಸ್ಲಂ ಬಾಷಾ, ಪಿಎಸ್ಐ ಎಂ. ಪಾಷಾ, ಸಿಬ್ಬಂದಿಯಾದ ಬಸವರಾಜ ಭಾವಿಕಟ್ಟಿ, ಬಾಬಾಸಾಬ್, ಸೈಫನಮಾ, ವಿದೇಶ್ ಭಾಗವಹಿಸಿದ್ದರು.