ಕಲಬುರ್ಗಿ: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸಿ

ಕಲಬುರ್ಗಿ: ಗ್ರಾಮ ಪಂಚಾಯಿತಿ ಸಿಬ್ಬಂದಿ 25ರಿಂದ 30 ವರ್ಷ ಸೇವೆ ಮಾಡಿದ್ದರೂ ಯಾವುದೇ ಸೇವಾ ನಿಯಮಾವಳಿಗಳಿರುವುದಿಲ್ಲ. ಆದೇಶಗಳಿದ್ದರೂ ಪಂಚಾಯಿತಿ ಅಧಿಕಾರಿಗಳು ಜಾರಿ ಮಾಡುವುದಿಲ್ಲ. ಹೀಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವಾಗ ಗ್ರಾ.ಪಂ. ಸಿಬ್ಬಂದಿಯನ್ನು ಒಳಪಡಿಸಬೇಕು ಎಂದು ಒತ್ತಾಯಿಸಿ ಗ್ರಾ.ಪಂ. ನೌಕರರ ಸಂಘದ ಸದಸ್ಯರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್, ಗುಮಾಸ್ತ ಹುದ್ದೆಯಿಂದ ಗ್ರೇಡ್–2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಆಯ್ಕೆ ಮೂಲಕ ನೇರ ನೇಮಕಾತಿಗೆ ತಡೆ ನೀಡಿದ್ದ ಆದೇಶವನ್ನು ಆರ್ಥಿಕ ಇಲಾಖೆಯು ಜೂನ್ 24ರಂದು ನೇಮಕ ಮಾಡಲು ಸಹಮತಿ ನೀಡಿದೆ. ಇದರನ್ವಯ ಸರ್ಕಾರವು ನೇಮಕಾತಿ ಆದೇಶ ನೀಡಿ ಒಂದೇ ದಿನದಲ್ಲಿ ನೇಮಕಾತಿ ಆದೇಶವನ್ನು ಹಿಂಪಡೆದಿರುವುದರಿಂದ 20–25 ವರ್ಷ ಸೇವೆ ಮಾಡಿ ನಿವೃತ್ತಿ ಅಂಚಿನಲ್ಲಿರುವ ಸಾವಿರಾರು ನೌಕರರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಜೂಲೈ 3ರಂದು ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
2017ರವರೆಗೆ ವರೆಗೆ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ಇ.ಎಫ್.ಎಂ.ಎಸ್ಗೆ ಒಳಪಡಿಸಬೇಕೆಂದು ಆದೇಶ ನೀಡಿದ್ದರೂ ಸಾವಿರಾರು ಸಿಬ್ಬಂದಿ ಸೇರದೇ ಬಾಕಿ ಇದ್ದಾರೆ. ಅವರನ್ನೂ ಸೇರಿಸಬೇಕು. 15ನೇ ಹಣಕಾಸಿನಲ್ಲಿ ವಾಟರ್ ಮ್ಯಾನ್, ಪಂಪ್ ಆಪರೇಟರ್ ಮತ್ತು ಸ್ವೀಪರ್ಗಳಿಗೆ ವೇತನ ಪಾವತಿಸುವಂತೆ ಸರ್ಕಾರ ಆದೇಶ ಮಾಡಿದ್ದರೂ ಗ್ರಾ.ಪಂ.ಗಳಲ್ಲಿ ವೇತನ ಪಾವತಿಯಾಗುತ್ತಿಲ್ಲ. 18ರಿಂದ 20 ತಿಂಗಳ ವೇತನ ಬಾಕಿ ಇದೆ. ಸರ್ಕಾರ 15ನೇ ಹಣಕಾಸಿನ ವೇತನದ ಬಾಬ್ತು ಹಣ ಕಡಿತ ಮಾಡಿ ನೇರವಾಗಿ ಗ್ರಾ.ಪಂ. ಸಿಬ್ಬಂದಿ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಇಸ್ಮಾಯಿಲ್, ‘ಜಿಲ್ಲಾ ಪಂಚಾಯಿತಿ ಹಂತದಲ್ಲಿ ಈಡೇರಿಸಲು ಸಾಧ್ಯವಾಗುವ ಬೇಡಿಕೆಗಳನ್ನು 15 ದಿನದಲ್ಲಿ ಈಡೇರಿಸುವ ಭರವಸೆ ನೀಡಿದರು. 15ನೇ ಹಣಕಾಸು ಯೋಜನೆಯಲ್ಲಿ ವೇತನ ಪಾವತಿ ಮಾಡದ ಅಧಿಕಾರಿಗಳ ಮಾಹಿತಿ ತರಿಸಿಕೊಂಡು ಅಂಥವರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಹರಸೂರ, ಜಿಲ್ಲಾ ಖಜಾಂಚಿ ಶಿವಾನಂದ ಕವಲಗಾ, ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.