ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದಲ್ಲಿ ಕಮಲಮ್ಮ ಎಂಬ ಅಜ್ಜಿಯೊಬ್ಬರು ಹೊಸ ಮನೆ ಕಟ್ಟಿಸಿಕೊಡುವಂತೆ ಆಗ್ರಹಿಸಿ ತಮ್ಮ ಹಳೆ ಮನೆಯ ಚಾವಣಿ ಮೇಲೆ ಕುಳಿತು ಪ್ರತಿಭಟನೆ ಮಾಡಿದರು.
ಕಂದಾಯ ಸಚಿವ ಆರ್.ಅಶೋಕ ಅವರು ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಗ್ರಾಮಕ್ಕೆ ಬಂದ ಸಂದರ್ಭದಲ್ಲೂ ಅಜ್ಜಿ ಮನೆ ಏರಿ ಕುಳಿತಿದ್ದರು. ಆದರೆ ಇದನ್ನು ಗಮನಿಸದ ಸಚಿವರು ವಾಹನದಲ್ಲಿ ಮುಂದೆ ಸಾಗಿದರು.
ಮಳೆ ಹಾಗೂ ಭೀಮಾ ಪ್ರವಾಹದಿಂದಾಗಿ ನನ್ನ ಮನೆ ಹಾಳಾಗಿದೆ. ವಾಸಕ್ಕೆ ಸುರಕ್ಷಿತ ಮನೆ ಇಲ್ಲ. ಹೊಸ ಮನೆ ಕಟ್ಟಿಸಿ ಕೊಡುವವರೆಗೂ ಚಾವಣಿ ಬಿಟ್ಟು ಇಳಿಯುವುದಿಲ್ಲ ಎಂದು ಅಜ್ಜಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.
ಕಳೆದ ಮೂರು ದಿನಗಳಿಂದಲೂ ಅಜ್ಜಿ ಹಗಲಿಡೀ ಮನೆ ಮೇಲೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ಅವರನ್ನು ಮಾತನಾಡಿಸದೇ ಹೋದ ಸಚಿವರ ನಡೆ ಖಂಡನಾರ್ಹ ಎಂದು ಗ್ರಾಮಸ್ಥರು ದೂರಿದರು.