ಕಲಬುರಗಿ: ಸೇವೆ ಕಾಯಂ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಗುರುವಾರ 22ನೇ ದಿನಕ್ಕೆ ಕಾಲಿಟ್ಟಿತು.
ಒನಕೆ ಹಿಡಿದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕಿಯರು, ಸರ್ಕಾರ, ಕೆಲ ಪದವಿ ಕಾಲೇಜುಗಳ ಪ್ರಾಂಶುಪಾಲರು, ಕೆಲವು ವಿಭಾಗಗಳ ಮುಖ್ಯಸ್ಥರು ಅತಿಥಿ ಉಪನ್ಯಾಸಕರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿದರು.
ಅತಿಥಿ ಉಪನ್ಯಾಸಕರಾದ ಚೇತನಾ, ಪ್ರಣೋತಿ, ಮಮತಾ ಪಾಟೀಲ, ಅವ್ವಮ್ಮ, ರಾಧಿಕಾ, ಶಶಿರೇಖಾ, ಮಿಲನ ಕಾಂಬ್ಳೆ, ಸೀತಾ, ಸಾತಮ್ಮ, ನಾಗವೇಣಿ ಹಿರೇಮಠ, ಅಂಜನಾದೇವಿ, ಚಂದ್ರಕಾಂತ ಶಿರೋಳ್ಳಿ, ಗುರುರಾಜ ಕುಲಕರ್ಣಿ, ಆಂಜನೇಯ, ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.