ವಾಡಿ: ಸೋಮವಾರ ರಾತ್ರಿ ಸುರಿದ ಮಳೆಯಿಂದ ನಾಲವಾರ ವಲಯದ ವಿವಿಧ ಕಡೆ ಹಳ್ಳಗಳು ಉಕ್ಕಿ ಹರಿದಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಡಿದೆ.
ರಾಷ್ಟ್ರೀಯ ಹೆದ್ದಾರಿ– 150ರ ಮೂಲಕ ಹಲಕರ್ಟಿ ಗ್ರಾಮದ ಬಳಿ ಹಾದು ಹೋಗುವ ಹಳ್ಳ ಉಕ್ಕಿ ಹರಿದಿದ್ದರಿಂದ ಸುತ್ತಲಿನ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಹೋಗಿ ಅಪಾರ ಪ್ರಮಾಣದ ತೊಗರಿ, ಹತ್ತಿ ಬೆಳೆ ನಷ್ಟವಾಗಿದೆ.
ಕೊಂಚೂರು, ಬಳವಡ್ಗಿ, ಕಡಬೂರು, ದೇವಾಪೂರ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರಿಂದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದ ನೂರಾರು ಜನರ ಪರದಾಟಕ್ಕೆ ಕಾರಣವಾಯಿತು.
ಬಳವಡ್ಗಿ ಗ್ರಾಮದ ಹಲವು ಬಡಾವಣೆಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ದವಸ ದಾನ್ಯಗಳು ಹಾಳಾದ ವರದಿಯಾಗಿದೆ. ನೀರು ನುಗ್ಗಿದ್ದರಿಂದ ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ. ಮನೆಗಳಿಗೆ ನುಗ್ಗಿ ಮಳೆ ನೀರನ್ನು ಹೊರಹಾಕಲು ಬಳವಡ್ಗಿಯ ಏಲಾಂಬಿಕಾ ದೇವಸ್ಥಾನದ ಸುತ್ತಲೂ ಮಳೆ ನೀರು ನಿಂತಿದೆ.
ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ ಸುರಿದ ಮಳೆಯಿಂದ ಸನ್ನತ್ತಿ ಗ್ರಾಮದಲ್ಲಿ 3 ಮನೆಗಳು ನೆಲಕ್ಕುರುಳಿವೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.