ಕಲಬುರ್ಗಿ: ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ಸತತ ಮೂರನೇ ದಿನವಾದ ಸೋಮವಾರ ಭಾರಿ ಮಳೆ ಸುರಿದಿದೆ.
ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಊರುಗಳನ್ನು ಸಂಪರ್ಕಿಸುವ ಸೇತುವೆಗಳ ಮೇಲೆ ಹಳ್ಳಗಳು ಉಕ್ಕಿ ಹರಿಯುತ್ತಿವೆ.
ಕಲಬುರ್ಗಿ ನಗರ, ಚಿಂಚೋಳಿ, ಕಾಳಗಿ, ಕಮಲಾಪುರ, ಚಿತ್ತಾಪುರ, ಸೇಡಂ ಹಾಗೂ ಜೇವರ್ಗಿ ತಾಲ್ಲೂಕಿನ ಹಲವೆಡೆ ಮಳೆಯ ಅರ್ಭಟ ಮುಂದುವರೆದಿದೆ.
ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದ ಬಳಿ ಸೇತುವೆ ತುಂಬಿ ಹರಿಯುತ್ತಿದ್ದು ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ಹಲವು ವಾಹನಗಳು ಸೇತುವೆ ದಡದಲ್ಲಿ ನಿಂತಿವೆ.
ಕಮಲಾಪುರದ ಮರಗುತ್ತಿ ತಾಂಡಾದ ಬೆಟ್ಟದ ಮೇಲೆ ಸೀತಾಫಲ ಹಣ್ಣು ತರಲು ಹೋಗಿದ್ದ ಶಾಂತಾಬಾಯಿ ಹೋಬು ರಾಡೋಡ (40) ಹಳ್ಳ ದಾಟುವ ಪ್ರಯತ್ನದಲ್ಲಿದ್ದಾಗ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಅರ್ಧ ಕಿ.ಮೀ. ದೂರದಲ್ಲಿ ಅವರ ಶವ ಮರದ ಮೇಲೆ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.