ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆ ಕಳೆದ 12 ತಾಸುಗಳ ಅವಧಿಯಲ್ಲಿ 84.9 ಮಿ.ಮೀ ಮಳೆ ಸುರಿದಿದೆ.
ಶುಕ್ರವಾರ ರಾತ್ರಿ 9ರ ಸುಮಾರಿಗೆ ಏಕಾಏಕಿ ಸುರಿಯಲು ಆರಂಭಿಸಿದ ಮಳೆ ತಡರಾತ್ರಿ ಮತ್ತಷ್ಟು ಬಿರುಸು ಪಡೆಯಿತು. ಶನಿವಾರ ಬೆಳಿಗ್ಗೆ 10ರವರೆಗೂ ಬಿಟ್ಟೂಬಿಡದೆ ಸುರಿಯಿತು. ಇದರಿಂದ ನಗರದ ತಗ್ಗುಪ್ರದೇಶಗಳ ರಸ್ತೆ, ಮನೆಗಳಲ್ಲಿ ನೀರು ಸಂಗ್ರಹಗೊಂಡಿತು.
ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಸರಿಯಾಗಿ 1070 ಮಿ.ಮೀ. ಮಳೆಯಾಗಿದೆ. ಆದರೆ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 600 ಮೆ.ಮೀ ಮಾತ್ರ. ಅಂದರೆ, 470 ಮಿ.ಮೀ. ಹೆಚ್ಚುವರಿ ಮಳೆ ಬಿದ್ದಿದೆ ಎಂದು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಚಿಂಚೋಳಿ, ಜೇವರ್ಗಿ, ಆಳಂದ, ಅಫಜಲಪುರ, ಕಮಲಾಪುರ, ಕಲಬುರ್ಗಿ ತಾಲ್ಲೂಕುಗಳ ಬಹುಪಾಲು ಕಡೆ ಕೂಡ ರಭಸದ ಮಳೆ ಸುರಿದಿದೆ.
ಸದ್ಯ ಹದವಾದ ಮಳೆ ಬೀಳುತ್ತಿದ್ದು ಅಂತರ್ಜಲ ವೃದ್ಧಿ ಹಾಗೂ ಹಿಂಗಾರಿ ಜೋಳ, ಕಡಲೆ ಬಿತ್ತನೆಗೆ ಅನುಕೂಲವಾಗಲಿದೆ.
ಆದರೆ, ಈ ವಾರ ಮಳೆ ತುಸು ಬಿಡುವು ನೀಡಿ, ಬಿಸಿಲು ಬೀಳದಿದ್ದರೆ ಸದ್ಯ ಕೈಗೆ ಬಂದ ಹೆಸರು, ಉದ್ದು, ಸೋಯಿಬಿನ್ ಹಾಗೂ ತೊಗರಿ ಇಳುವರಿ ಕುಸಿಯಲಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೀಲಕಂಠ ಕಾಳೇಶ್ವರ ದೇವಸ್ಥಾನ ಜಲಾವೃತ
ಶುಕ್ರವಾರ ರಾತ್ರಿ 10ಗಂಟೆಯಿಂದ ಶನಿವಾರ ಬೆಳಿಗ್ಗೆ 5ಗಂಟೆವರೆಗೆ ಸುರಿದ ಬಿರುಸಿನ ಮಳೆಗೆ ಕಾಳಗಿಯ ರೌದ್ರಾವತಿ ನದಿ ಉಕ್ಕಿಹರಿದು ಪ್ರಸಿದ್ಧ ನೀಲಕಂಠ ಕಾಳೇಶ್ವರ ದೇವಸ್ಥಾನ ಸೇರಿದಂತೆ ಇತರ ಐತಿಹಾಸಿಕ ದೇಗುಲಗಳು ಜಲಾವೃತಗೊಂಡಿವೆ.
ಕಾಳಗಿ - ಕೊಡದೂರ ಸಂಪರ್ಕದ ಹಳೆ ಸೇತುವೆ ಮುಳುಗಡೆಯಾಗಿದೆ. ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ಅಪಾರ ಹಾನಿವುಂಟು ಮಾಡಿದೆ.