ಕಲಬುರಗಿ: ಇಲ್ಲಿನ ಸ್ವರ ಗಂಧರ್ವ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆಯ ವತಿಯಿಂದದತ್ತ ಜಯಂತಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಹಿಂದೂಸ್ತಾನಿ ಗಾಯಕ, ಶಿರಸಿಯ ಪಂಡಿತ ವಿನಾಯಕ ಹೆಗಡೆ ಅವರ ಕಂಚಿನ ಕಂಠದಿಂದ ತೇಲಿಬಂದ ಗಾಯನ ಪ್ರೇಕ್ಷಕರನ್ನು ರಂಜಿಸಿತು. ‘ಮಾಝೆ ಮಹೇರಾ ಪಂಢರಿ’ ಹಾಗೂ ‘ಉತ್ತಮರ ಸಂಗ ಎನಗಿತ್ತು ಸಲಹೋ...’ ಎಂಬ ಹಾಡುಗಳಂತೂ ಪ್ರೇಕ್ಷಕರನ್ನು ಹಿಡಿದಿಟ್ಟವು.
ನಿಖಿಲ್ ಕೊಲ್ಹಾರಕರ್, ವಿಜಯೇಂದ್ರ ಸಗರ ಅವರ ತಬಲಾ ಸಾಥ್, ಸುಧೀಂದ್ರ ಕುಲಕರ್ಣಿ ಅವರತಾಳ, ಬದರಿನಾಥ್ ಮುಡಬಿ ಅವರಸಂವಾದಿನಿ, ಅಭಿಷೇಕ ಜೋಶಿ ಅವರ ತಾನ್ಪರ ಸಾಥ್ ಮೋಡಿ ಮಾಡಿತು.
ಇದಕ್ಕೂ ಮುನ್ನ ಡಾ.ಗುರುರಾಜ ಶೇಷಗಿರಿ ದಂಡಾಪೂರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಮಾಧವ್ ಜೋಶಿ ಹಾಗೂ ಪ್ರಭಂಜನ ಅನಗರಕರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಸರೋಜಾ ಅನಗರಕರ್ ಅಧ್ಯಕ್ಷತೆ ವಹಿಸಿದ್ದರು. ಅಂಜನಾ ಕುಲಕರ್ಣಿ ನಿರೂಪಿಸಿದರು. ಅನನ್ಯ ಅನಗರಕರ್ ವಂದಿಸಿದರು.