ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಹೋಳಿ ಪ್ರಯುಕ್ತ ಸಂಪ್ರದಾಯದಂತೆ ಸೋಮವಾರ ಅಣಕು ಶವಯಾತ್ರೆ ನಡೆಸಿದರು.
ಗ್ರಾಮದ ಬಸ್ ನಿಲ್ದಾಣದಿಂದ ಪ್ರಾರಂಭವಾದ ಅಣಕು ಶವಯಾತ್ರೆಯನ್ನು ಶರಣಬಸವೇಶ್ವರ ಮಂದಿರದ ಬಳಿಯ ದೇಶಮುಖ ಅವರ ದೇವಡಿಯ ರಾಘವೇಂದ್ರ ದೇಸಾಯಿ ಅವರ ಮನೆಯ ಬಳಿ ಸಮಾರೋಪಗೊಳಿಸಲಾಯಿತು.
ಅಣಕು ಶವಯಾತ್ರೆಯನ್ನು ಮಸೀದಿ, ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಮನೆ, ಮಲ್ಲಕಾರ್ಜುನ ದೇವಾಲಯ, ಶಂಕರರಾವ್ ಮಾಲಿ ಪಾಟೀಲ ಮನೆ, ಶರಣಬಸಪ್ಪ ಮನೆಯ ಹತ್ತಿರ ನಿಲ್ಲಿಸಿ ಯಾರ ಮನೆಯ ಮುಂದೆ ಶವ ಬರುತ್ತದೆಯೋ ಅವರ ಹೆಸರನ್ನು ಹೇಳಿ ವಿಡಂಬನೆ ಮಾಡುತ್ತ, ಅಳುತ್ತ, ಕರೆಯುತ್ತ ಹಾಡುಗಳನ್ನು ಹೇಳುತ್ತ ಸಂಭ್ರಮಿಸಿದರು.
ಗ್ರಾಮದಲ್ಲಿ ಹೋಳಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಶುಕ್ರವಾರವೇ ಪ್ರಾರಂಭವಾಗಿವೆ. ಶುಕ್ರವಾರ ಯಲ್ಲಮ್ಮನ ಕೊಡ ನೆರವೇರಿಸಿದ ಭಕ್ತರು, ಶನಿವಾರ ಬೀಗರನ್ನು ಬರಮಾಡಿಕೊಳ್ಳುವುದು, ಭಾನುವಾರ ಮೈಲಾರಕ್ಕೆ ಹೋಗಿ ಬರುವುದು ನಡೆಸಿದರು.
ಇಂದಿನ ಕಾರ್ಯಕ್ರಮ: ಬೆಳಿಗ್ಗೆ ಮಠದ ಮರಿಗೆ ಜಗದ್ಗುರುಗಳಿಂದ ಪಟ್ಟಾಧಿಕಾರ, ಮಧ್ಯಾಹ್ನ 3ರಿಂದ ದುಲಂಡಿ ಪ್ರಯುಕ್ತ ಮದುವೆ, ಜೋಕುಮಾರನ ಮೆರವಣಿಗೆ, ರಾತ್ರಿ ಸಿದ್ಧಿಪಾತ್ರ ನಡೆಸಿ ಕೊನೆಗೆ ಕಾಮಣ್ಣನನ್ನು ದಹಿಸಿ ಬೂದಿಯನ್ನು ಹಣೆಗೆ ಹಚ್ಚಿಕೊಂಡು ನಂತರ ಬಾನಿನತ್ತ ಹಾರಿಸಿ ಕಾರ್ಯಕ್ರಮಕ್ಕೆ ತೆರೆ ಎಳೆಯುತ್ತಾರೆ.