ಆಳಂದ: ‘ಕುಲ ಮತ್ತು ಧರ್ಮಗಳ ಪ್ರತಿಷ್ಠೆಗಿಂತಹ ಮಾನವೀಯತೆಯು ಶ್ರೇಷ್ಠವಾದದ್ದು, ಎಲ್ಲ ಮಹಾತ್ಮರು ಮಾನವೀಯತೆಯನ್ನೇ ಬೋಧಿಸಿದ್ದಾರೆ ಎಂದು ಹಣಮಾಪುರದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ತಾಲ್ಲೂಕಿನ ಕೆರೂರ ಗ್ರಾಮದಲ್ಲಿ ಸೋಮವಾರ ಬೀರಲಿಂಗೇಶ್ವರ ಗದ್ದುಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನ ಗರ್ಭಗುಡಿಯ ಶಿಖರಕ್ಕೆ ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
‘ಗಾಳಿಗೆ ನೀರಿಗೆ ಬೆಂಕಿಗೆ ಜಾತಿ ಇಲ್ಲ. ಎಲ್ಲರನ್ನು ಒಂದುಗೂಡಿಸಿಕೊಂಡು ಹೋಗುವ ಸಿದ್ಧಾಂತ ಹಾಲುಮತದವರು ಬೆಳೆಸಿಕೊಳ್ಳಬೇಕು. ಜಾತಿಗಿಂತ ನೀತಿ ಮುಖ್ಯ’ ಎಂದು ಹೇಳಿದರು.
ಸಾನ್ನಿಧ್ಯವಹಿಸಿದ ಮಾದನಹಿಪ್ಪರಗಿಯ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಎಲ್ಲ ಜಾತಿ ಜನಾಂಗದವರು ಕೂಡಿಕೊಂಡು ಬೀರಲಿಂಗೇಶ್ವರ ಮತ್ತು ಮಲ್ಲಿಕಾರ್ಜುನ ಜಾತ್ರೆಗಳಲ್ಲಿ ಎರಡು ದೇವರ ಪಲ್ಲಕ್ಕಿ ಮೆರಸುತ್ತಿರುವುದು ನೋಡಿದರೆ ಭಾವೈಕ್ಯತೆಯ ಸಂಕೇತವಾಗಿದೆ’ ಎಂದರು.
ವೇದಿಕೆಯ ಮೇಲೆ ಪ್ರವಚನಕಾರ ಅವ್ವಣ್ಣ ಗುರುಗಳು, ಸಮಾಜದ ಹಿರಿಯರಾದ ಬೀರಣ್ಣ ಪೂಜಾರಿ ಕಡಗಂಚಿ ಇದ್ದರು.
ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ ಬಂದ ಶಿಖರದ ಕಳಸ ಮತ್ತು ಜೋಡಿ ಪಲ್ಲಕ್ಕಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಬಕಳಸ ಹೊತ್ತು ಬಂದರು.