ಕಲಬುರಗಿ: ನಾವು ಬಯಸಿದಂತಹ ಸ್ವಾತಂತ್ರ್ಯ, ಸಂವಿಧಾನದ ಗುರಿಗಳನ್ನು ಸಾಧಿಸುವಲ್ಲಿ ನಾವು ಸಫಲರಾಗಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು.
ಕಲಬುರಗಿಯ ಹೈಕೋರ್ಟ್ ಪೀಠದಲ್ಲಿ ಸೋಮವಾರ ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಭಾರತ 75 ವರ್ಷಗಳಲ್ಲಿ ವಿಶ್ವವೇ ಬೆರಗಿನಿಂದ ನೋಡುವಂತಹ ಸಾಧನೆ ಮಾಡಿದೆ. ಆದರೆ, ವಿಶಿಷ್ಟ ಸಂಸ್ಕೃತಿ, ಜನಜೀವನದ ಹಿನ್ನೆಲೆ ಹೊಂದಿರುವ ನಾವು, ನಮ್ಮ ಜೀವನದ ಮೌಲ್ಯಗಳಿಗೆ ಅನುಗುಣವಾಗಿ ನಾವು ಬಯಸಿದಂತಹ ಸ್ವಾತಂತ್ರ್ಯ ಪಡೆಯುವುದು ಬಾಕಿಯಿದೆ’ ಎಂದರು.
‘ಭಾರತ ಏನೇ ಸಾಧಿಸಿದರೂ ಬಡತನ, ಅನಕ್ಷರತೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ಪೂರ್ಣವಾಗಿ ಮೆಟ್ಟಿನಿಲ್ಲಲು ಆಗುತ್ತಿಲ್ಲ. ಇವುಗಳ ನಿವಾರಣೆಗೆ ನಾವು ಶ್ರಮಿಸಬೇಕು. ಉತ್ತಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು’ ಎಂದರು.
ಹೈಕೋರ್ಟ್ನ ಹೆಚ್ಚುವರಿ ರಿಜಿಸ್ಟಾರ್ ಜನರಲ್ ಕೆ.ಎಸ್. ವಿಜಯ, ಹೆಚ್ಚುವರಿ ರಿಜಿಸ್ಟಾರ್ (ನ್ಯಾಯಾಂಗ) ದಯಾನಂದ ವಿ.ಹಿರೇಮಠ, ನಾಯ್ಯಮೂರ್ತಿಗಳಾದ ಎಚ್.ಟಿ ನರೇಂದ್ರ ಪ್ರಸಾದ್, ಪಿ.ಎನ್. ದೇಸಾಯಿ, ಎಂ.ಜಿ.ಎಸ್ ಕಮಲ್, ಸಿ.ಎಂ.ಪೂಣಚ್ಚ ಇದ್ದರು.