ಕಲಬುರಗಿ: ‘ಕೋಲಿ ಸಮಾಜವನ್ನು ಪರಿಶಿಷ್ಟ ಜಾತಿಗೆ (ಎಸ್ಟಿ) ಸೇರ್ಪಡೆ ಕುರಿತು ಕೊಟ್ಟ ಭರವಸೆ ಉಳಿಸಿಕೊಳ್ಳಲು ಬಿಜೆಪಿ ಮಾತುತಪ್ಪಿತು. ಬಿಜೆಪಿಯ ನಡೆ ಖಂಡಿಸಿ, ಮನನೊಂದು ಕಾಂಗ್ರೆಸ್ ಸೇರಿರುವೆ’ ಎಂದು ಕಾಂಗ್ರೆಸ್ ಮುಖಂಡ ಬಾಬುರಾವ ಚಿಂಚನಸೂರ ಸ್ಪಷ್ಟನೆ ನೀಡಿದರು.
‘ಬಿಜೆಪಿ ತೊರೆದಿದ್ದರಿಂದ ಚಿತ್ತಾಪುರದಲ್ಲಿ ಬಿಜೆಪಿ ಪ್ರಭಾವ ಕುಸಿದಿದೆ. ಕಲ್ಯಾಣ ಕರ್ನಾಟಕದಾದ್ಯಂತ ಪ್ರಚಾರ ನಡೆಸಿ, ನನ್ನ ಶಕ್ತಿಯನ್ನು ತೋರಿಸುವೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೈಯನ್ನು ಇನ್ನಷ್ಟು ಬಲಪಡಿಸಿ, ಪಕ್ಷವನ್ನು ಬೆಳೆಸುವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಖರ್ಗೆ ಅವರು ಧೀಮಂತ ನಾಯಕ. ಖರ್ಗೆ ಅವರಿಂದ ಕೋಲಿ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗುತ್ತದೆ. ನಾನು ಹೋರಾಟಗಾರ. ನನ್ನದು ತೆರೆದಿಟ್ಟ ಇತಿಹಾಸ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ಗೆ ಬರಲಿಲ್ಲ’ ಎಂದರು.
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ನೇತೃತ್ವದಲ್ಲಿ ಪತ್ನಿ ಅಮರೇಶ್ವರಿ ಅವ ರೊಂದಿಗೆ ಕಾಂಗ್ರೆಸ್ ಸೇರಿರುವೆ. ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಡಿ.ಕೆ ಶಿವಕುಮಾರ ಅವರು ನೆರವಾಗಿ, 7 ಖಾತೆ ಕೊಡಿಸಿದ್ದರು’
ಎಂದರು.
ಉತ್ತರಿಸಲಾಗದೇ ಪತ್ರಿಕಾಗೋಷ್ಠಿ ಅರ್ಧಕ್ಕೆ ಮುಕ್ತಾಯ!: ‘ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ತಂದೆ–ಮಗ ಇದ್ದಂತೆ. ತಂದೆ ಮೇಲೆ ಮಗ ಮುನಿಸಿಕೊಳ್ಳುತ್ತಾನೆ. ತಂದೆಯಾದವನು ಮಗನನ್ನು ಕರೆಯಲೇಬೇಕು’ ಎಂದು ಬಾಬುರಾವ ಚಿಂಚನಸೂರ ತಿಳಿಸಿದರು.
ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ಸುದ್ದಿಗಾರರು, ‘ಖರ್ಗೆ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದು’, ‘ಕೋಲಿ ಸಮಾಜಕ್ಕೆ ಖರ್ಗೆಯಿಂದ ಕೊಡಲಿ ಪೆಟ್ಟು’, ‘40 ವರ್ಷ ಕೋಲಿ ಸಮಾಜವನ್ನು ತುಳಿದದ್ದು ಖರ್ಗೆ’, ‘ಬಿಜೆಪಿ ನನ್ನ ತಾಯಿ ಪಕ್ಷ’ ಎಂದೆಲ್ಲ ನೀವು ಹೇಳಿಕೆ ನೀಡಿದ್ದೀರಿ. ಈಗ ಹೇಗೆ ಕಾಂಗ್ರೆಸ್ ಸೇರಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಖರ್ಗೆ ರಾಷ್ಟ್ರ ಮಟ್ಟದ ದೊಡ್ಡ ನಾಯಕ. ಅವರು ಮಾತಿಗೆ ನಿಂತರೆ ಸಂಸತ್ತು ಗಡ ಗಡ ನಡುಗುತ್ತದೆ’ ಎಂದು ಹೊಗಳತೊಡಗಿದರು. ‘ಖರ್ಗೆ ಅವರ ಗುಣಗಾನ ಬಿಟ್ಟು ಪ್ರಶ್ನೆಗಳಿಗೆ ಉತ್ತರಿಸಿ’ ಎಂದು ಸುದ್ದಿಗಾರರು ಆಗ್ರಹಿಸಿದರು. ಆಗ ಅವರೇ ಎಲ್ಲರಿಗೂ ಕೈ ಮುಗಿದು ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೆ ಮುಗಿಸಿ ಹೊರಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.