ಚಿತ್ತಾಪುರ: ಪುರಸಭೆ ವ್ಯಾಪ್ತಿಯ ವಾರ್ಡ್ 9ರಲ್ಲಿನ ನಾಗಾವಿ ಚೌಕ್ ಹತ್ತಿರ ನಾಯಿಯೊಂದು ಕಚ್ಚಿದ್ದರಿಂದ ಗಾಯಗೊಂಡಿದ್ದ ಮೂವರು ಸಂತ್ರಸ್ತರಿಗೆ ಪುರಸಭೆಯಿಂದ ತಲಾ ₹5 ಸಾವಿರ ಮೊತ್ತದ ಚೆಕ್ ಅನ್ನು ಪುರಸಭೆ ಮುಖ್ಯಾಧಿಕಾರಿ ಸಂಜೀವ ಮಾಂಗ ಬುಧವಾರ ವಿತರಣೆ ಮಾಡಿದರು.
ನಾಯಿ ದಾಳಿಗೆ ತುತ್ತಾಗಿ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಚೇತನಕುಮಾರ ಹಣಮಂತ, ಅಂಬರೀಶ ಈರಪ್ಪ, ಮಾಣಿಕಮ್ಮ ಭೀಮಣ್ಣ ಅವರಿಗೆ ತಲಾ ₹5 ಸಾವಿರ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
‘ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಹಾಗೂ ಕಡಿತದ ದೂರು ಕೇಳಿ ಬಂದಿವೆ. ನಾಯಿ ಹಾವಳಿಗೆ ಕಡಿವಾಣ ಹಾಕಲು ಪಶು ಇಲಾಖೆಯ ಅಧಿಕಾರಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು. ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆಂದು ಪಶು ಇಲಾಖೆಯಿಂದ ₹30 ಲಕ್ಷ ವೆಚ್ಚದ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಈ ಕುರಿತು ಮೇಲಧಿಕಾರಿಗೆ ಪತ್ರ ಬರೆದು ಅನುದಾನದ ವ್ಯವಸ್ಥೆಗೆ ಮನವಿ ಮಾಡುತ್ತೇವೆ’ ಎಂದು ಮುಖ್ಯಾಧಿಕಾರಿ ಸಂಜೀವ ಮಾಂಗ ಹೇಳಿದರು.