ಆಳಂದ: ಕಲಬುರ್ಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಹೆಮ್ಮೆಯ ಸಂಗತಿ. ಈ ಭಾಗದಲ್ಲಿ ನಾಡು ನುಡಿ ಅಭಿಮಾನ ಹೆಚ್ಚಿಸಲು ಕಾರಣವಾಗಲಿದೆ ಎಂದು ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮಕ್ಕರ ಶನಿವಾರ ಆಗಮಿಸಿದ ಸಮ್ಮೇಳನದ ಪ್ರಚಾರ ರಥವನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಭಕರೆ ಮಾತನಾಡಿ, ‘ಸಮ್ಮೇಳನದಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಿಶೇಷವಾಗಿ ವಿದ್ಯಾರ್ಥಿಗಳು, ಕಲಾವಿದರೂ, ಸಾಹಿತ್ಯಾಸಕ್ತರು ಭಾಗವಹಿಸಬೇಕು ಎಂದರು.
ಗ್ರಾ.ಪಂ ಅಧ್ಯಕ್ಷೆ ಚಿನ್ನಮ್ಮ ಸವರೆ, ಮುಖ್ಯ ಶಿಕ್ಷಕ ಆನಂದರಾವ ಪಾಟೀಲ, ವಲಯ ಅಧ್ಯಕ್ಷ ವಿಜಯಕುಮಾರ ಜಿಡಗೆ, ರಾಜಕುಮಾರ ಹಿರೇಮಠ, ಗಣೇಶ ಓಂನಾಮಶೇಟ್ಟಿ ಇದ್ದರು. ಗ್ರಾಮದ ಮುಖ್ಯ ಬೀದಿಗಳಲ್ಲಿ ಕನ್ನಡ ರಥವು ಸಾಗಿ ಬಂತು. ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಆಳಂದ ಪಟ್ಟಣದಲ್ಲಿ ತಹಶೀಲ್ದಾರ್ ದಯಾನಂದ ಪಾಟೀಲ ಪ್ಅವರು ಪ್ರಚಾರ ರಥಕ್ಕೆ ಹೂಮಾಲೆ ಹಾಕಿ ಸ್ವಾಗತಿಸಿದರು. ಕಸಾಪ ಅಧ್ಯಕ್ಷ ವಿಶ್ವನಾಥ ಭಕರೆ, ಕಲ್ಯಾಣಿ ಬಿಕಮಾಳೆ, ಶಿವಪುತ್ರಪ್ಪ ಅಲ್ದಿ, ರಾಜಕುಮಾರ ಸುತಾರ, ಸಿದ್ದಾರ್ಥ ಹಸೂರೆ, ಸುಮನ್ ಕವಲಗಾ, ಪ್ರಭಾಕರ ಹೆಬಳಿ ಇದ್ದರು.
ನಂತರ ಪ್ರಚಾರ ರಥ ಖಜೂರಿ ಗ್ರಾಮಕ್ಕೆ ತೆರಳಿತು. ಅಲ್ಲಿ ವಲಯ ಅಧ್ಯಕ್ಷ ಶಿವಪುತ್ರ ಶ್ಯಾರ ನೇತೃತ್ವದಲ್ಲಿ ರಥವನ್ನು ಸ್ವಾಗತಿಸಲಾಯಿತು. ರಾಜಶೇಖರ ಹರಿಹರ, ಶ್ರೀನಾಥ ಖೂನೆ, ಮಂಜುನಾಥ ಕಂದಗೋಳೆ ಇದ್ದರು.