ರಾಜ್ಯ ಸರ್ಕಾರವು 2020–21ನೇ ಸಾಲಿಗೆ ನಿಗದಿಪಡಿಸಿದ ₹ 1136.81 ಕೋಟಿ ಅನುದಾನದ ಪೈಕಿ ಮೂರು ಕಂತುಗಳಲ್ಲಿ ಒಟ್ಟು ₹ 787.94 ಕೋಟಿ ಬಿಡುಗಡೆ ಮಾಡಿದೆ. ಮಂಡಳಿಯ ಪ್ರಾರಂಭಿಕ ಶಿಲ್ಕು ₹308.70 ಕೋಟಿ ಇದ್ದು, ಪ್ರಸಕ್ತ ಸಾಲಿನಲ್ಲಿ 5,422 ಭೌತಿಕ ಗುರಿಗೆ 3,915ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಮೂಲಕ ಶೇ 72ರಷ್ಟು ಗುರಿ ಸಾಧಿಸಿದೆ. ಅದೇ ರೀತಿ ಈ ವರ್ಷ ಇದುವರೆಗೆ ₹ 822.70 ಕೋಟಿ ಅನುದಾನವನ್ನು ಖರ್ಚು ಮಾಡುವ ಮೂಲಕ ಶೇ. 75 ರಷ್ಟು ಆರ್ಥಿಕ ಸಾಧನೆ ಮಾಡಲಾಗಿದೆ. ಹೀಗಾಗಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನಕ್ಕೆ ಅರ್ಹವಾಗಿದ್ದರಿಂದ ಹಣ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
’ಮಂಡಳಿಯು ನಿಯಮಿತವಾಗಿ ಅನುಷ್ಠಾನಾಧಿಕಾರಿಗಳೊಂದಿಗೆ ಕಾಮಗಾರಿವಾರು ಪರಾಮರ್ಶಿಸಿ, ಕಾಲಬದ್ಧ ಮಿತಿಯೊಳಗಡೆ ಪ್ರಗತಿಯನ್ನು ಸಾಧಿಸಲು ಆದ್ಯತೆ ನೀಡಿದ್ದರಿಂದ ಭೌತಿಕ ಹಾಗೂ ಆರ್ಥಿಕ ಗುರಿಯಲ್ಲಿ ಗಣನೀಯ ಸಾಧನೆ ಮಾಡಿದೆ. ಇದರ ಪ್ರತಿಫಲವಾಗಿ 4ನೇ ಕಂತಿನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಮೂಲಕ ಮೈಲುಗಲ್ಲು ಸಾಧಿಸಿದಂತಾಗಿದೆ’ ಎಂದಿದ್ದಾರೆ.