ಕಲಬುರಗಿ: ಅಸಮರ್ಪಕ ರಸಾಯನಿಕ ಗೊಬ್ಬರ ಬಳಕೆ, ಜಮೀನುಗಳಿಗೆ ಅಧಿಕ ಪ್ರಮಾಣದ ನೀರು ಹರಿಸುವುದು, ಹೆಚ್ಚು ಪ್ರಮಾಣದ ಕೀಟನಾಶಗಳನ್ನು ಬಳಸುವುದು ಹಾಗೂ ಮಿಶ್ರ ಬೆಳೆ ಮಾಡದೆ ಒಂದೇ ತೆರನಾದ ಬೆಳೆ ಬೆಳೆಯುವುದರಿಂದ ದಿನದಿಂದ ದಿನಕ್ಕೆ ಭೂಮಿಯ ಫಲವತ್ತತೆ ತೀವ್ರ ಕೊರತೆ ಉಂಟಾಗಿ ಇಳುವರಿ ಪ್ರಮಾಣ ಕಡಿಮೆಯಾಗುತ್ತಿದೆ.
ಭೂಮಿಯ ಮಣ್ಣಿನ ಆರೋಗ್ಯ ಕಾಪಾಡುವ ಮೂಲಕ ಸುಸ್ಥಿರ ಬೆಳೆ ಬೆಳೆಯಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಅಡಿಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಮಣ್ಣು ಆರೋಗ್ಯ ತಪಾಸಣಾ ಪ್ರಯೋಗಾಲಯ ಸ್ಥಾಪನೆ ಮಾಡಿ, ರೈತರ ಜಮೀನಿನಲ್ಲಿರುವ ಮಣ್ಣು ಮಾದರಿ ಸಂಗ್ರಹಿಸಿ ಅದರಲ್ಲಿರುವ ಅಂಶಗಳ ಮೇಲೆ ಕೃಷಿ ಬೀಜ ಹಾಗೂ ರಸಗೊಬ್ಬರ ಹಾಕಲು ಸಲಹೆ ನೀಡುತ್ತಿದೆ.
ಜಿಲ್ಲಾ ಕೃಷಿ ಇಲಾಖೆಯಿಂದ ನಗರದ ಕೋಟನೂರ (ಡಿ) ರಸ್ತೆಯಲ್ಲಿ ಮಣ್ಣು ಆರೋಗ್ಯ ಪರೀಕ್ಷಾ ಪ್ರಯೋಗಾಲಯ ಇದ್ದು, ಅಲ್ಲಿ ಸರ್ಕಾರ ನಿಗದಿ ಪಡಿಸಿದ ಗುರಿಯಷ್ಟು ರೈತ ಸಂಪರ್ಕ ಕೇಂದ್ರಗಳಿಂದ ತಂದು ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಿ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.
ಮಣ್ಣು ತಪಾಸಣೆ ಆಸಕ್ತಿ ವಹಿಸದ ರೈತರು:
ಜಿಲ್ಲೆಯಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ರೈತರು ಇದ್ದಾರೆ. ಆದರೆ, ಬಹುತೇಕರಿಗೆ ಮಣ್ಣಿನ ಸಂರಕ್ಷಣೆ, ಮಣ್ಣು ಪರೀಕ್ಷೆಯ ಮಾಹಿತಿ ಹಾಗೂ ಜಾಗೃತಿ ಕೊರತೆಯಿಂದ ತಪಾಸಣೆಗೆ ಮಾತ್ರ ರೈತರು ಮುಂದೆ ಬರುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ನಡೆಸುವ ಪರೀಕ್ಷೆಯನ್ನು ಬಿಟ್ಟರೆ, ರೈತರೇ ಸ್ವಯಂ ಪ್ರೇರಿತರಾಗಿ ಮಣ್ಣಿನ ಪರೀಕ್ಷೆಗೆ ಮುಂದಾಗುವುದು ಅತಿ ವಿರಳವಾಗಿದೆ.
ಕೇವಲ ಬೆರಳೆಣಿಯಷ್ಟು ರೈತರು ಮಾತ್ರ ಸ್ವಯಂ ಪ್ರೇರಿತವಾಗಿ ತಪಾಸಣೆ ಮಾಡಿ ಇಲಾಖೆ ಸಲಹೆ ಮೇರೆಗೆ ಸಮತೋಲಿತ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮಣ್ಣಿನ ಪರೀಕ್ಷೆಯ ಮಹತ್ವದ ಬಗ್ಗೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿಲ್ಲ. ಆದ್ದರಿಂದ ಅದರ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯಿಂದ ಸಂಚಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ರೈತ ಮುಖಂಡ ಬಸವರಾಜ.
‘ಪ್ರತಿ ಮೂರು ವರ್ಷಕ್ಕೆ ಒಮ್ಮೆ ರೈತರ ಜಮೀನುಗಳ ಮಣ್ಣು ಸಂಗ್ರಹಿಸಿ ತಪಾಸಣೆ ಮಾಡಬೇಕು ಎಂಬ ನಿಯಮ ಇದೆ. ಆದರೆ ಸರ್ಕಾರ ಕಡಿಮೆ ಗುರಿ ನಿಗದಿ ಮಾಡಿರುವುದು ಸರಿಯಲ್ಲ. ಹಳ್ಳಿಗಳಿಗೆ ಸಂಚಾರಿ ವಾಹನದ ಮೂಲಕ ಸಂಚರಿಸಿ ಮನವರಿಕೆ ಮಾಡಬೇಕು ಎನ್ನುತ್ತಾರೆ ರೈತ ಮುಖಂಡರು.
‘ಸರ್ಕಾರ ಮೊದಲು ಯೋಜನೆ ಪ್ರಾರಂಭ ಮಾಡಿದಾಗ ಹೆಚ್ಚಿನ ಸಂಖ್ಯೆಯ ಟಾರ್ಗೆಟ್ ನೀಡುತ್ತಿದ್ದರು. ಆಗ ಪ್ರಯೋಗಾಲಯದಲ್ಲಿ ಸುಮಾರು 18 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಗುರಿ ಕಡಿಮೆಯಾಗಿರುವುದರಿಂದ ಸಿಬ್ಬಂದಿಯೂ ಕಡಿಮೆ ಇದ್ದಾರೆ. ದಿನಾಲೂ 50 ರಿಂದ 60 ಸ್ಯಾಂಪಲ್ಗಳ ಟೆಸ್ಟ್ ಮಾಡಲಾಗುತ್ತಿದೆ’ ಎಂದು ಪ್ರಯೋಗಾಲಯದ ಪ್ರಭಾರ ಕೃಷಿ ಅಧಿಕಾರಿ ಯಾಸಿರ್ ಅರ್ಫಾದ್ ಹೇಳಿದರು.
ಸರ್ಕಾರದ ಗುರಿ ಸಾಧಿಸಿ ಇಲಾಖೆ:
2023–24ನೇ ಸಾಲಿಗೆ ಸರ್ಕಾರದಿಂದ ಕಲಬುರಗಿ ಜಿಲ್ಲೆಯಲ್ಲಿ ಎನ್ಎಫ್ಎಸ್ಎಂ ಪ್ರಾತ್ಯಕ್ಷಿಕೆ ಯೋಜನೆಯಲ್ಲಿ 9,025, ಮಣ್ಣು ಆರೋಗ್ಯ ಫಲವತ್ತತೆ ಯೋಜನೆ ಅಡಿಯಲ್ಲಿ 5,000 ಗುರಿ ಸೇರಿ ಒಟ್ಟು 14,025 ನಿಗದಿ ಮಾಡಲಾಗಿದೆ. ನವೆಂಬರ್ 28ರ ವರೆಗೆ 11,551 ಮಣ್ಣು ಮಾದರಿಯನ್ನು ತಪಾಸಣೆ ಮಾಡಿ ಶೇ 82.36ರಷ್ಟು ಗುರಿ ಸಾಧಿಸಲಾಗಿದೆ. ಇನ್ನೂ 2,475 ಮಣ್ಣು ಮಾದರಿ ತಪಾಸಣೆ ಮಾಡಬೇಕಿದೆ.
ಜಿಲ್ಲೆಯಲ್ಲಿ 2015ರಿಂದ 2017ರ ಮಾರ್ಚ್ 31ರವರೆಗೆ ಮೊದಲ ಅವಧಿಯಲ್ಲಿ 77,610 ಮಣ್ಣಿನ ಮಾದರಿಗಳ ನೋಂದಣಿಯಾಗಿತ್ತು. ಇದು 5,43,754 ರೈತರ ಜಮೀನಿನ ಮಣ್ಣು ಮಾದರಿಯನ್ನು ತಪಾಸಣೆ ಒಳಪಟ್ಟಿದೆ. 4,00,807 ಮಣ್ಣು ಆರೋಗ್ಯ ಪತ್ರ ಸಿದ್ಧಮಾಡಲಾಗಿತ್ತು, 99,643 ಮಾದರಿಯನ್ನು ಸ್ವೀಕರಿಸಲಾಗಿತ್ತು. ದಾಖಲಾದ 38,222 ಮಣ್ಣಿನ ಮಾದರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಕೋಟನೂರು (ಡಿ)ಯಲ್ಲಿ 98,978 ಮಣ್ಣಿನ ಮಾದರಿಯನ್ನು ತಪಾಸಣೆ ಮಾಡಲಾಗಿತ್ತು.
2ನೇ ಅವಧಿಯಲ್ಲಿ 1,09,320 ಗುರಿ ನೀಡಲಾಗಿತ್ತು. 1,01,005 ಮಣ್ಣಿನ ಮಾದರಿಯನ್ನು ತಪಾಸಣೆ ಮಾಡಲಾಗಿತ್ತು. ಎರಡು ಅವಧಿ ಸೇರಿ ಒಟ್ಟು 5,93,466 ಲಕ್ಷ ಕಾರ್ಡ್ ಸಿದ್ಧವಾಗಿದ್ದವು. ಅವುಗಳನ್ನು ಸಂಬಂಧಿಸಿದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡಿದೆ. ಮಣ್ಣಿನ ಫಲವತ್ತತೆ ಸುಧಾರಿಸಲು ಅನುಸರಿಸಬೇಕಾದ ಸಲಹೆಗಳನ್ನೂ ಇಲಾಖೆಯಿಂದ ನೀಡಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಸಾವಯವ ಇಂಗಾಲ ಕಡಿಮೆ:
‘ಭೂಮಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಕನಿಷ್ಠ 0.5ಕ್ಕಿಂತ ಹೆಚ್ಚಿರಬೇಕು. ಆದರೆ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆ ಇದೆ. ರಂಜಕ ಮಧ್ಯಮ ಪ್ರಮಾಣದಲ್ಲಿದೆ. ಜಿಂಕ್ ಪ್ರಮಾಣವೂ ಕೊರತೆ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಂಕ್ ಪ್ರಮಾಣ ಕಡಿಮೆ ಇರುವುದರಿಂದ ತೊಗರಿ ಸೈನಿಂಗ್ ಬರುತ್ತಿಲ್ಲ. ಪ್ರತಿ ಹೆಕ್ಟೇರ್ಗೆ 5 ಕೆ.ಜಿ ಜಿಂಕ್, 10 ಕೆಜಿ ಸಾರಜನಕ, 20 ಕೆ.ಜಿ. ರಂಜಕವನ್ನು ನೀಡಲು ರೈತರಿಗೆ ಸಲಹೆ ನೀಡಲಾಗಿದೆ. ಜಿಲ್ಲೆಯ ಭೂಮಿಯಲ್ಲಿ ಪೊಟ್ಯಾಶ್ ಪ್ರಮಾಣ ಅಧಿಕ ಇದೆ. ರೈತರು ಮಣ್ಣು ತಪಾಸಣೆ ಮಾಡಿ ರಸಗೊಬ್ಬರ ಬಳಕೆ ಮಾಡಿದರೆ ಹಣ ಮತ್ತು ಸಮಯ ಎರಡು ಉಳಿತಾಯವಾಗಲಿದೆ’ ಎಂದು ಹೇಳಿದರು.
ಪೂರಕ ಮಾಹಿತಿ: ವೆಂಕಟೇಶ ಹರವಾಳ
ಭೂಮಿಯ ಆರೋಗ್ಯ ಕಾಪಾಡಲು ಸಮತೋಲಿತ ಗೊಬ್ಬರ ಬಳಕೆ ವರ್ಷದಿಂದ ವರ್ಷಕ್ಕೆ ಬೆಳೆ ಬದಲಾವಣೆ ಮಾಡುವುದರಿಂದ ಸಾಧ್ಯವಿದೆ. ರೈತರು ಆ ಬಗ್ಗೆ ಗಮನ ಹರಿಸಿ ಕೆಲಸ ಮಾಡಬೇಕುಸೋಮನಾಥ ರೆಡ್ಡಿ ಪ್ರಗತಿಪರ ರೈತ
ಸರ್ಕಾರದಿಂದ ನೀಡುವ ಮಣ್ಣು ಆರೋಗ್ಯ ಪತ್ರ ರೈತರಿಗೆ ಅನುಕೂಲವಾಗಲಿದೆ. ಆದರೆ ರಸಗೊಬ್ಬರ ಬಳಕೆ ಕುರಿತು ಮಾಹಿತಿ ಇರುವುದಿಲ್ಲ. ಇಲಾಖೆಯಿಂದ ತರಬೇತಿ ಮಾದರಿಯಲ್ಲಿ ರೈತರನ್ನು ಜಾಗೃತಗೊಳಿಸಬೇಕುಹಣಮಂತಪ್ಪ ಬೆಳಗುಂಪಿ ಪ್ರಗತಿಪರ ರೈತ
ಮಣ್ಣಿನ ಫಲವತ್ತತೆ ಹಾಗೂ ಸ್ಥಿತಿಗತಿ ಕುರಿತು ತಿಳಿದುಕೊಳ್ಳಲು ರೈತರು ಪ್ರತಿ ಮೂರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ತಮ್ಮ ಭೂಮಿಯಲ್ಲಿನ ಮಣ್ಣಿನ ಪರೀಕ್ಷೆ ಮಾಡಿಸುವುದು ಅವಶ್ಯಶಿವಲಿಂಗಪ್ಪ ಅವಂಟಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಜೇವರ್ಗಿ
ಮಣ್ಣು ಪರೀಕ್ಷೆ ಮಾಡಿಸುವುದರಿಂದ ಭೂಮಿಯ ಫಲವತ್ತತೆ ಹಾಗೂ ಪೋಷಕಾಂಶಗಳ ಲಭ್ಯತೆ ಕುರಿತು ತಿಳಿದುಕೊಳ್ಳಬಹುದಾಗಿದೆ. ಇದರಿಂದ ಮುಂಬರುವ ಮುಂಗಾರು ಹಂಗಾಮಿನಲ್ಲಿ ಯಾವ ಬೆಳೆಗಳನ್ನು ಬಿತ್ತನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.ಮರೆಪ್ಪ ಹಸನಾಪುರ ರೈತ ಕಟ್ಟಿಸಂಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.