ಚಿಂಚೋಳಿ: ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಬರುವ ಕುಸ್ರಂಪಳ್ಳಿ ಗ್ರಾಮದ ಸುತ್ತಮುತ್ತ ಎರಡು ತಿಂಗಳಿಂದೀಚೆಗೆ ಚಿರತೆಯೊಂದು ಮೂರು ದನಗಳನ್ನು ಕೊಂದು ರಕ್ತ ಕುಡಿದಿದ್ದು, ಗ್ರಾಮಸ್ಥರಲ್ಲಿ ಚಿರತೆ ಭೀತಿ ಎದುರಾಗಿದೆ.
ತೆಲಂಗಾಣದ ಪಡಿಯಾಲ ತಾಂಡಾ, ಕುಸ್ರಂಪಳ್ಳಿ ತಾಂಡಾ ಹಾಗೂ ಕುಸ್ರಂಪಳ್ಳಿ ಗ್ರಾಮದ ಒಂದೊಂದು ರಾಸುಗಳನ್ನು ಚಿರತೆ ಬಲಿ ಪಡೆದಿದೆ. ಈಗಾಗಲೇ ಕುಸ್ರಂಪಳ್ಳಿ ಗೊಟ್ಟಮಗೊಟ್ಟ ಮಧ್ಯದ ಮಾಣಿಕಪುರ ಸುತ್ತಲಿನ ಕಾಡಿನಲ್ಲಿ ಚಿರತೆಯನ್ನು ದನ ಕಾಯುವ ವ್ಯಕ್ತಿ ನೋಡಿದ್ದಾರೆ. ಜತೆಗೆ ಹೆಜ್ಜೆ ಗುರುತು ಪತ್ತೆ ನಡೆಸಲಾಗುತ್ತಿದೆ.
ಹಸುವನ್ನು ಕೊಂದು ಅದರ ರಕ್ತ ಹೀರಿದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಮತ್ತು ಅರಣ್ಯ ರಕ್ಷಕ ಸಿದ್ಧಾರೂಢ ಹೊಕ್ಕುಂಡಿ ಪರಿಶೀಲಿಸಿದರು. ಕುಸ್ರಂಪಳ್ಳಿ ಸುತ್ತಲೂ ಹಸುಗಳು ಚಿರತೆ ದಾಳಿಯಿಂದ ಮೃತಪಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕದಿಂದ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಡಂಗೂರ ಸಾರಿಸಲಾಗಿದೆ. ಕಾಡಿನ ಒಳಗಡೆ ಹೋಗದಂತೆ ತಿಳಿ ಹೇಳಲಾಗಿದೆ ಸಂಜೀವಕುಮಾರ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಈವರೆಗೂ ನೋಡಿಲ್ಲ. ನೋಡಿದವರು ಮಾಹಿತಿ ನೀಡಿದ್ದಾರೆ. ಹೆಜ್ಜೆ ಗುರುತು ಚಿರತೆ ಹೋಲುವಂತಿದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.