ಕಲಬುರ್ಗಿ: ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಒಂದು ವರ್ಷವಾದರೂ ಅದರ ಖರ್ಚು– ವೆಚ್ಚದ ಲೆಕ್ಕ ಕೊಟ್ಟಿಲ್ಲ. ಹಣ ದುರ್ಬಳಕೆ ಆಗಿರುವ ಸಾಧ್ಯತೆ ಇದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ಮುಖಂಡರು ಶನಿವಾರ ಪತ್ರಚಳವಳಿ ನಡೆಸಿದರು.
‘ಸಮ್ಮೇಳನದ ಖರ್ಚಿನ ವಿವರ, ಸರಿಯಾದ ರೀತಿಯಲ್ಲಿ ಲೆಕ್ಕ ಇಟ್ಟಿದ್ದರೆ ಇಷ್ಟೊತ್ತಿಗಾಗಲೇ ಲೆಕ್ಕ ಕೊಡಬೇಕಾಗಿತ್ತು. ರಾಜ್ಯ ಸರ್ಕಾರದಿಂದ ಎಷ್ಷು ಹಣ ಬಂದಿದೆ? ರಾಜ್ಯ ಸರ್ಕಾರಿ ನೌಕರರು, ವಿವಿಧ ಸಂಘ ಸಂಸ್ಥೆಗಳು ಕೊಟ್ಟ ಹಣವೆಷ್ಟು? ಅದರಲ್ಲಿ ಖರ್ಚಾದ ಮೊತ್ತವೆಷ್ಟು? ಎನ್ನುವುದನ್ನು ಹೇಳಲು ಇಷ್ಟು ಕಾಲಾವಕಾಶ ಬೇಕೆ?’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ನಾಲವಾರಕರ್ ಕಿಡಿ ಕಾರಿದರು.
ಸಮ್ಮೇಳನದ ಲೆಕ್ಕ ಕೇಳಿದರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಅವರು, ಜಿಲ್ಲಾಧಿಕಾರಿ ಮೇಲೆ ಹಾಕುತ್ತಿದ್ದಾರೆ. ತಮಗೂ ಲೆಕ್ಕಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಆದ್ದರಿಂದ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದರು.
ಮುಖಂಡರಾದ ಚರಣರಾಜ ರಾಠೋಡ, ರವಿ ವಾಲಿ, ಪ್ರಮೋದ್, ಅಸ್ಲಂ ಖುರೇಷಿ, ಕವೀನ್ ನಾಟೀಕಾರ, ಮಲ್ಲಿಕಾರ್ಜುನ ನಾಯಿಕೋಡಿ ಇದ್ದರು.