ಕಾಳಗಿ: ಲಾಕ್ಡೌನ್ ಕಾರಣ ತಾಲ್ಲೂಕಿನ ವಿವಿಧ ಗ್ರಾಮಗಳ ಜನರ ಗುರುವಾರ ಬೆಳಿಗ್ಗೆಯೇ ಪಟ್ಟಣಕ್ಕೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದರು. ಆದರೆ, ಬೈಕ್ ಮೇಲೆ ಸುತ್ತುವ ಪೋಲಿ ಹುಡುಗರಿಗೆ ಮಾತ್ರ ತಡೆ ಇಲ್ಲದಾಗಿತ್ತು.
ಬೆಳಿಗ್ಗೆಯಿಂದಲೇ ಸಾರಿಗೆ ಸಂಸ್ಥೆಯ ಒಂದೂ ಬಸ್ ರಸ್ತೆಗಿಳಿಯದೇ, ಬಸ್ ಘಟಕದಲ್ಲೇ ನಿಂತಿದವು. ಪಟ್ಟಣದ ಬಸ್ ನಿಲ್ದಾಣ ಬಳಿಯ ಕೋಡ್ಲಿ ಅಗಸಿಯ ಮುಖ್ಯರಸ್ತೆ, ಮಲ್ಲಿಕಾರ್ಜುನ ದೇವಸ್ಥಾನ ಬಳಿ ಮತ್ತು ಚಾವಡಿಕಟ್ಟೆ ಬಳಿ ಮುಖ್ಯರಸ್ತೆಗೆ ಅಡ್ಡಲಾಗಿ ಕಟ್ಟಿಗೆಕಟ್ಟಿ ವಾಹನ ಸಂಚರಿಸಲು ಬರದಂತೆ ಮಾಡಲಾಗಿದೆ.
10 ಗಂಟೆ ಬಳಿಕವೂ ಅಲ್ಲಲ್ಲಿ ಕೆಲ ಅಂಗಡಿಗಳ ಹಿಂಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದ್ದರಿಂದ ಮತ್ತು ಕೆಲ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಕಾಣದೇ ಇದ್ದುದರಿಂದ ಬೈಕ್ ಸಂಚಾರ ಸಾಮಾನ್ಯವಾಗಿತ್ತು.
ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ ಮತ್ತು ಮಸೀದಿ ಬಳಿಯ ಕೋವಿಡ್ ಸಹಾಯ ಕೇಂದ್ರಗಳು ಭಣಗಟ್ಟಿದವು.
ಶಾಂತಿ ಸಭೆ: ಎಎಸ್ಐ ಕುಮಾರವ್ಯಾಸ ಅವಧಾನಿ, ಮುಖ್ಯ ಕಾನ್ಸ್ಟೆಬಲ್ ನಾಗೇಂದ್ರಪ್ಪ ಹಾಗರಗಿ, ಕಾನ್ಸ್ಟೆಬಲ್ ಮಂಜುನಾಥ ಗಾಯಕವಾಡ, ರಾಜಶೇಖರ, ಪ್ರಕಾಶ ತಂಡ ಮಳಗಾ ಕೆ., ತೆಂಗಳಿಗೆ ತೆರಳಿ ಜಾತ್ರೆ ನಿಷೇಧಿಸಿ ಶಾಂತಿಸಭೆ ನಡೆಸಿ ಬಳಿಕ ಗಸ್ತು ತಿರುಗಿದರು.